ನವದೆಹಲಿ: ‘ಆರೋಪಿಗಳಿಗೆ ಜಾಮೀನು ನೀಡುವಾಗ ಅಪರಾಧದ ಗಂಭೀರತೆಯನ್ನು ಮೌಲ್ಯಮಾಪನ ಮಾಡಿ ನ್ಯಾಯಾಲಯಗಳು ಆದೇಶ ನೀಡಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
‘ನ್ಯಾಯಾಂಗ ಪ್ರಕ್ರಿಯೆಯ ಮೂಲಭೂತ ಮಾನದಂಡಗಳಿಗೆ ವಿರುದ್ಧವಾಗಿರುವಂಥ ಆದೇಶಗಳನ್ನು ನೀಡಬಾರದು’ ಎಂದೂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ವರದಕ್ಷಿಣೆ ಸಾವಿನ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್ನ ಆದೇಶವನ್ನು ಅವಲೋಕಿಸಿ ಈ ಮೇಲಿನಂತೆ ಹೇಳಿದೆ.
‘ಇಲ್ಲಿ ಮಹಿಳೆಯೊಬ್ಬಳು ಮದುವೆಯಾದ ಒಂದು ವರ್ಷದಲ್ಲೇ ಅಸಹಜವಾಗಿ ಸಾವನ್ನಪ್ಪಿದ್ದಾಳೆ. ಇಂಥ ಪ್ರಸ್ತುತ ಪ್ರಕರಣಗಳಲ್ಲಿ ಹೈಕೋರ್ಟ್ ಆರೋಪಿಯ ಅಪರಾಧದ ಗಂಭೀರ ಸ್ವರೂಪವನ್ನು ಮರೆತು ಬಿಡುವುದಿಲ್ಲ. ಮಹಿಳೆಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಆರೋಪಿಯ ಅಪರಾಧದ ಗಂಭೀರತೆಯನ್ನು ಮೌಲ್ಯಮಾಪನ ಮಾಡಬೇಕು. ಮಹಿಳೆಯು ಸಾವಿಗೀಡುವ ಸ್ವಲ್ಪ ಸಮಯ ಮುನ್ನ ಆರೋಪಿಗಳು ದೂರವಾಣಿ ಕರೆ ಮಾಡಿ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಆರೋಪಿಗಳ ವಿರುದ್ಧ ವರದಕ್ಷಿಣೆ ಕಿರುಕುಳದಂಥ ನಿರ್ದಿಷ್ಟ ಆರೋಪಗಳಿವೆ’ ಎಂದೂ ನ್ಯಾಯಾಲಯವು ತಿಳಿಸಿದೆ.
‘ಸಿಆರ್ಪಿಸಿ ಸೆಕ್ಷನ್ 439ರ ಅಡಿಯಲ್ಲಿ ಆರೋಪಿಗೆ ಜಾಮೀನು ನೀಡುವ ಕುರಿತು ನಿರ್ಧರಿಸುವ ನ್ಯಾಯಾಧೀಶರ ಮನಸಿನಲ್ಲಿ ಬರುವ ಕಾರಣಗಳು ತಾರ್ಕಿಕ ಗುಣಮಟ್ಟದಿಂದ ಕೂಡಿರಬೇಕು. ಕಾರಣ ಸಂಕ್ಷಿಪ್ತ ಸ್ವರೂಪದಲ್ಲಿರಬಹುದು ಆದರೆ, ಅವು ಗುಣಮಟ್ಟ ಮತ್ತು ತಾರ್ಕಿಕತೆಯಿಂದ ಕೂಡಿರಬೇಕು’ ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ... ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನಿಧನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.