ನವದೆಹಲಿ: ಕೊರೊನಾ ವೈರಸ್ನಿಂದಾಗಿ ಜಗತ್ತಿನಲ್ಲೇ ಅತೀ ಹೆಚ್ಚು ಸಾವು ಕಂಡಿರುವ ಇಟಲಿಯಿಂದ 263 ಮಂದಿ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣ ತಲುಪಿದೆ.
ವಿಮಾನವು ಬೆಳಿಗ್ಗೆ 9.15ಕ್ಕೆ ದೆಹಲಿಗೆ ಬಂದಿಳಿದಿದ್ದು, ಭಾರತ ಸರ್ಕಾರವು ಅಲ್ಲಿಂದ ಸುರಕ್ಷಿತವಾಗಿ ಕರೆತಂದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ಅವರೆಲ್ಲರನ್ನೂ ಇಂಡೋ-ಟಿಬೆಟನ್ ಗಡಿ ಪೊಲೀಸರ ಮುಂದಾಳುತ್ವದಲ್ಲಿಛಾವ್ಲಾದಲ್ಲಿ ನಡೆಯುತ್ತಿರುವ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದೆ. ಕೋವಿಡ್-19 ಸಮಸ್ಯೆಯಿಂದಾಗಿ ವಿದೇಶದಿಂದ ಬಂದವರನ್ನು ಈಗಿನ ನಿಯಮಾವಳಿ ಪ್ರಕಾರ, ತಪಾಸಣೆ ನಡೆಸಲಾಗುತ್ತದೆ ಮತ್ತು 14 ದಿನಗಳ ಕಡ್ಡಾಯ ಪ್ರತ್ಯೇಕ ವಾಸಕ್ಕೆ ಸೂಚಿಸಲಾಗುತ್ತಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿರುವ ಪ್ರತ್ಯೇಕವಾದ ಲಾಂಜ್ನಲ್ಲಿ ಈ 263 ಮಂದಿಯನ್ನೂ ಇಳಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಾದರಿ ಕಾರ್ಯಾಚರಣಾ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ.
ಅತ್ಯಂತ ಭಯಾನಕವಾಗಿ ಕೋವಿಡ್-19 ಪೀಡಿತವಾಗಿರುವ ಇಟಲಿಯಲ್ಲಿ 47 ಸಾವಿರಕ್ಕೂ ಹೆಚ್ಚು ಮಂದಿ ಸೋಂಕು ಪೀಡಿತರಾಗಿದ್ದು, ಐದು ಸಾವಿರದಷ್ಟು ಮಂದಿ ಸಾವನ್ನಪ್ಪಿದ್ದಾರೆ. ಈ ಹಿಂದೆ ಇಟಲಿಯ ಮಿಲಾನ್ನಿಂದ 218 ಮಂದಿ ಭಾರತೀಯರನ್ನು ಸುರಕ್ಷಿತವಾಗಿ ಕರೆತಂದಿರುವ ಭಾರತ ಸರ್ಕಾರವು, ಭಾನುವಾರ ರೋಮ್ನಿಂದ 263 ಭಾರತೀಯರನ್ನು ಕರೆತಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.