ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಜನವರಿ 16ರಂದು ಕೋವಿಡ್-19 ಲಸಿಕೆ ವಿತರಣೆ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವಾಗಲಿದೆ.
ಹೊಸ ವರ್ಷದಲ್ಲಿ ಬಿಡುಗಡೆ ಮಾಡಲಾಗಿರುವ ಕೋವಿಡ್-19 ಲಸಿಕೆಗಳನ್ನು ಈಗಾಗಲೇ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ.
ಗುರುವಾರದಂದು ಮಹಾರಾಷ್ಟ್ರದಲ್ಲಿ 3,579 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 19,81,623ಕ್ಕೆ ತಲುಪಿದೆ. ಹಾಗೆಯೇ 24 ತಾಸಿನಲ್ಲಿ 70 ಮಂದಿ ಮೃತಪಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 50,291ಕ್ಕೆ ತಲುಪಿದೆ.
ಕಳೆದ 24 ತಾಸಿನಲ್ಲಿ 3,309 ಮಂದಿ ಚೇತರಿಸಿದ್ದಾರೆ. ಇದರೊಂದಿಗೆ ಒಟ್ಟು 18,77,588 ಮಂದಿ ರೋಗ ಮುಕ್ತಿಯನ್ನು ಪಡೆದಿದ್ದಾರೆ. ಮಹಾರಾಷ್ಟ್ರದಲ್ಲಿ 52,558 ಸಕ್ರಿಯ ಪ್ರಕರಣಗಳಿವೆ.
ವಾಣಿಜ್ಯ ನಗರಿ ಮುಂಬೈನಲ್ಲಿ 607 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 3,01,081ರಷ್ಟಾಗಿದೆ. ಒಂಬತ್ತು ಮಂದಿ ಮೃತಪಟ್ಟಿದ್ದು, ಒಟ್ಟು 11,221 ಮಂದಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಅಭಿಯಾನ: ಇದೇ 16ರಂದು ಮೋದಿ ಚಾಲನೆ
ನೆರೆಯ ಕೇರಳದಲ್ಲಿ ಗುರುವಾರದಂದು 5490 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದೆ. ಹಾಗೆಯೇ 4,337 ಮಂದಿ ಚೇತರಿಸಿದ್ದಾರೆ ಎಂದು ಅಲ್ಲಿನ ಆರೋಗ್ಯ ಇಲಾಖೆ ವರದಿ ಮಾಡಿದೆ.
ಕೇರಳದಲ್ಲೀಗ 66,503 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, 7,61,154 ಮಂದಿ ಚೇತರಿಸಿದ್ದಾರೆ.
ಮತ್ತಷ್ಟು ಮೂವರಲ್ಲಿ ಕೇರಳದಲ್ಲಿ ಬ್ರಿಟನ್ ಮೂಲದ ಹೊಸ ಸ್ವರೂಪದ ಕೊರೊನಾ ವೈರಸ್ ಪತ್ತೆಯಾಗಿದೆ.ಹಾಗೆಯೇ ಒಟ್ಟು ಸೋಂಕಿತರ ಸಂಖ್ಯೆ 8,31,259ಕ್ಕೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 340 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ದಾಖಲಾಗಿದೆ. ಹಾಗೆಯೇ ಕಳೆದ 24 ತಾಸಿನಲ್ಲಿ 390 ಚೇತರಿಸಿದ್ದು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಒಟ್ಟು ಕೋವಿಡ್-19 ಸೋಂಕಿತರ ಸಂಖ್ಯೆ 631589 ತಲುಪಿದ್ದು, 6,17,930 ಮಂದಿ ಚೇತರಿಸಿದ್ದಾರೆ. ಇನ್ನು 2937 ಸಕ್ರಿಯ ಪ್ರಕರಣಗಳಿದ್ದು, 10,722 ಮಂದಿ ಮೃತಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.