ADVERTISEMENT

ಮನೆಗೆಲಸದವರಿಗೆ ಅವಕಾಶ; ಸಲೂನ್ ತೆರೆಯಲು ಒಪ್ಪಿಗೆ: ಗೃಹ ಸಚಿವಾಲಯದ ನಿಯಮಾವಳಿ

​ಪ್ರಜಾವಾಣಿ ವಾರ್ತೆ
Published 2 ಮೇ 2020, 20:42 IST
Last Updated 2 ಮೇ 2020, 20:42 IST
ಲಾಕ್‌ಡೌನ್‌ನಿಂದಾಗಿ ಕ್ಷೌರದ ಅಂಗಡಿ ಮುಚ್ಚಿರುವುದು
ಲಾಕ್‌ಡೌನ್‌ನಿಂದಾಗಿ ಕ್ಷೌರದ ಅಂಗಡಿ ಮುಚ್ಚಿರುವುದು   

ನವದೆಹಲಿ: ದೇಶದಾದ್ಯಂತ ಅನ್ವಯವಾಗುವಂತೆ ಮನೆಗೆಲಸದವರು ತಮ್ಮ ವೃತ್ತಿ ಮುಂದುವರಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಅವರನ್ನು ಮನೆಗೆಲಸಕ್ಕೆ ಬಳಸಿಕೊಳ್ಳ ಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುವ ಅವಕಾಶವನ್ನು ನಿವಾಸಿ ಸಂಘಗಳಿಗೆ (ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್) ನೀಡಲಾಗಿದೆ.

‘ಹೊರಗಿನವರಿಗೆ ಪ್ರವೇಶ ನೀಡುವುದನ್ನು ನಿವಾಸಿ ಸಂಘಗಳಿಗೆ ಬಿಡಲಾಗಿದೆ. ಆದರೆ ಆರೋಗ್ಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ’ ಎಂದು ಗೃಹಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ತಮ್ಮ ಆವರಣದಲ್ಲಿ ಹೊರಗಿನವರಿಗೆ ಅವಕಾಶ ಮಾಡಿಕೊಟ್ಟಾಗ ವೈರಸ್ ಸೋಂಕು ತಗಲುವುದು ಮೊದಲಾದ ಅನಾಹುತಗಳು ಸಂಭವಿಸಿದರೆ, ಅವರ ಪ್ರವೇಶಕ್ಕೆ ಅವಕಾಶ ಮಾಡಿ ಕೊಟ್ಟವರೇ ಹೊಣೆಗಾರರು ಎಂದು ಗೃಹಸಚಿವಾಲಯ ಎಚ್ಚರಿಸಿದೆ.

ADVERTISEMENT

ಹೊಸ ನಿಯಮಾವಳಿ ಪ್ರಕಾರ, ಮನೆಗೆಲಸದವರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಲು ಹಾಗೂ ಸಲೂನ್‌ಗಳನ್ನು ತೆಗೆಯಲು ಯಾವುದೇ ನಿರ್ಬಂಧ ವಿಧಿಸಲಾಗಿಲ್ಲ.

39 ದಿನಗಳ ಬಳಿಕ ಸಲೂನ್‌ ಹಾಗೂ ಕ್ಷೌರದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ಮಾತ್ರ ಇದಕ್ಕೆ ಅವಕಾಶವಿದ್ದು, ಕೆಂಪು ವಲಯಗಳಲ್ಲಿ ನಿಷೇಧ ಮುಂದುವರಿಯಲಿದೆ.

ಮದುವೆಗೆ 50 ಜನರಿಗೆ ಅವಕಾಶ
*ಮೇ 4ರಿಂದ ಅನ್ವಯವಾಗುವಂತೆ, ಕಂಟೈನ್‌ಮೆಂಟ್‌ ವಲಯ ಹೊರತುಪಡಿಸಿ ದೇಶದಾದ್ಯಂತ ಎಲ್ಲ ವಲಯಗಳಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ನೀಡಲಾಗಿದೆ; 50ಕ್ಕಿಂತ ಹೆಚ್ಚು ಜನರನ್ನು ಮದುವೆಗೆ ಆಹ್ವಾನಿಸುವಂತಿಲ್ಲ. ಸಾಮಾಜಿಕ ಅಂತರ ಕಡ್ಡಾಯ. ಈ ಮುನ್ನ ಜಿಲ್ಲಾಡಳಿತದ ಅನುಮತಿ ಪಡೆಯಬೇಕಿತ್ತು.

* ಅಂತ್ಯಸಂಸ್ಕಾರದಲ್ಲಿ ಗರಿಷ್ಠ 20 ಮಂದಿ ಭಾಗಿಯಾಗಬಹುದು.

* ಪುಸ್ತಕ, ಲ್ಯಾಪ್‌ಟಾಪ್ ಸೇರಿದಂತೆ ಅನಿವಾರ್ಯವಲ್ಲದ ವಸ್ತುಗಳನ್ನುಇ–ಕಾಮರ್ಸ್‌ ಕಂಪನಿಗಳು ಮಾರಾಟ ಮಾಡಲು ಅನುಮತಿ;ಹಸಿರು ಹಾಗೂ ಕಿತ್ತಳೆ ವಲಯದಲ್ಲಿ ಅವಕಾಶ. ಕೆಂಪು ವಲಯದಲ್ಲಿ ಅವಶ್ಯಕ ವಸ್ತುಗಳ ಮಾರಾಟಕ್ಕೆ ಮಾತ್ರ ಅನುಮತಿ; ಕಂಟೈನ್‌ಮೆಂಟ್‌ ವಲಯಗಳಲ್ಲಿಇ–ಕಾಮರ್ಸ್ ಕಂಪನಿಗಳು ವಸ್ತುಗಳನ್ನು ಪೂರೈಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.