ಶ್ರೀಕಾಕುಲಂ: ಕೋವಿಡ್–19 ಸೋಂಕಿನಿಂದಾಗಿ ಮೃತಪಟ್ಟ ವ್ಯಕ್ಯಿಯೊಬ್ಬರ ದೇಹವನ್ನು ಜೆಸಿಬಿಯಲ್ಲಿ ಸ್ಮಶಾನಕ್ಕೆ ಕೊಂಡೊಯ್ದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಸಾ ಪುರಸಭೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
‘ಇದು ಅಮಾನವೀಯ ನಡೆ’ ಎಂದು ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ, ಮೃತದೇಹವನ್ನು ಸ್ಥಳಾಂತರಿಸುವಾಗನಿಯಮಗಳನ್ನೂ ಪಾಲಿಸಿಲ್ಲ ಎಂದು ದೂರಿದ್ದಾರೆ.ಮೃತ ವ್ಯಕ್ತಿಯು ಪುರಸಭೆ ಉದ್ಯೋಗಿಯಾಗಿದ್ದರು.
ಈ ಮಾಹಿತಿಯನ್ನು ಆಧರಿಸಿ, ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜೆ.ನಿವಾಸ್ ಅವರಿಗೆ ರಾಜ್ಯ ಸರ್ಕಾರ ಸೂಚಿಸಿದೆ. ಪಲಸಾ ಪುರಸಭೆ ಆಯುಕ್ತ ಟಿ. ನಾಗೇಂದ್ರ ಕುಮಾರ್ ಹಾಗೂ ಸ್ಯಾನಿಟರಿ ಇನ್ಸ್ಪೆಕ್ಟರ್ ಎನ್.ರಾಜೀವ್ ಅವರನ್ನು ಅಮಾನತು ಮಾಡಲಾಗಿದೆ.
ಪ್ರಕರಣ ಸಂಬಂಧ ತೆಲುಗು ದೇಶಂಪಕ್ಷ ದ(ಟಿಡಿಪಿ) ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ‘ಕೊರೊನಾವೈರಸ್ ಸಂತ್ರಸ್ತರ ಮೃತ ದೇಹಗಳನ್ನು ಪ್ಲಾಸ್ಟಿಕ್ನಿಂದ ಸುತ್ತಿ ಜೆಸಿಬಿ ಮತ್ತು ಟ್ರಾಕ್ಟರ್ಗಳಲ್ಲಿ ಸಾಗಿಸುವುದನ್ನು ನೋಡಿ ಅತ್ಯಂತ ಆಘಾತಗೊಂಡಿದ್ದೇನೆ. ಮೃತರುಸಾವಿನಲ್ಲೂ ಗೌರವ ಮತ್ತು ಘನತೆಗೆ ಅರ್ಹರು. ಅಮಾನವೀಯವಾಗಿ ನಡೆದುಕೊಂಡ ವೈ.ಎಸ್.ಜಗನ್ಸರ್ಕಾರಕ್ಕೆ ನಾಚಿಕೆಯಾಗಬೇಕು’ ಎಂದು ಟ್ವೀಟ್ ಮಾಡಿದ್ದಾರೆ.
ಇಂತಹದೇ ಮತ್ತೊಂದು ಪ್ರಕರಣಜಿಲ್ಲೆಯ ಸೋಮ್ಪೇಟಾ ಪಟ್ಟಣದಲ್ಲಿ ಜೂನ್ 24ರಂದು ನಡೆದಿತ್ತು. ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ದೇಹವನ್ನು ಟ್ರಾಕ್ಟರ್ನಲ್ಲಿ ಸಾಗಿಸಲಾಗಿತ್ತು.
ಈ ಎರಡೂ ಪ್ರಕರಣಗಳ ವಿಡಿಯೊಗಳನ್ನು ನಾಯ್ಡು ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.