ಶ್ರೀನಗರ: ಕೋವಿಡ್-19 ಲಸಿಕೆಗಳು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ, ಬದಲಾಗಿ ಮಾನವೀಯತೆಗೆ ಸೇರಿದ್ದಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫೆರನ್ಸ್ ಪಕ್ಷದ ಮುಖಂಡ ಒಮರ್ ಅಬ್ದುಲ್ಲಾ ತಿಳಿಸಿದರು.
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಕೊರೊನಾ ವೈರಸ್ ಲಸಿಕೆಗಳನ್ನು ಬಿಜೆಪಿಯ ಲಸಿಕೆ ಎಂದು ಟೀಕಿಸಿದ ಬೆನ್ನಲ್ಲೇ ಒಮರ್ ಅವರಿಂದ ಇಂತಹದೊಂದು ಅಭಿಪ್ರಾಯ ವ್ಯಕ್ತವಾಗಿದೆ.
ಸದ್ಯಕ್ಕೆ ನಾನು ಲಸಿಕೆ ಹಾಕಿಸಿಕೊಳ್ಳುತ್ತಿಲ್ಲ. ಬಿಜೆಪಿಯ ಲಸಿಕೆಯನ್ನು ನಾನು ಹೇಗೆ ನಂಬಬಲ್ಲೆ, ನಮ್ಮ ಲಸಿಕೆ ಸಿದ್ಧವಾದಾಗಎಲ್ಲರಿಗೂ ಉಚಿತ ಲಸಿಕೆ ಸಿಗುತ್ತದೆ. ನಾವು ಬಿಜೆಪಿಯ ಲಸಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದ್ದರು.
ಇದನ್ನೂ ಓದಿ:ಕೋವಿಡ್ ಲಸಿಕಾ ಅಭಿಯಾನ: 75 ಲಕ್ಷ ನೋಂದಣಿ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಒಮರ್ ಅಬ್ದುಲ್ಲಾ, ನನಗೆ ಬೇರೆಯವರ ವಿಚಾರ ತಿಳಿದಿಲ್ಲ. ಆದರೆ ನನ್ನ ಸರದಿ ಬಂದಾಗ ನಾನು ಸಂತೋಷದಿಂದ ಲಸಿಕೆ ಸ್ವೀಕರಿಸುತ್ತೇನೆ. ಈ ವೈರಸ್ ಮಾರಕವಾಗಿದ್ದು, ಲಸಿಕೆಯು ಇದನ್ನು ಹೋಗಲಾಡಿಸಿ ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಾಗುವುದಾದರೆ ನನ್ನನ್ನು ಸೇರಿಸಿ ಎಂದು ಒಮರ್ ಅಬ್ದುಲ್ಲಾ ತಿಳಿಸಿದರು.
ಹೆಚ್ಚು ಜನರಿಗೆ ಲಸಿಕೆ ಹಾಕಿದರೆ ಅದು ದೇಶ ಹಾಗೂ ಆರ್ಥಿಕತೆಗೆ ಉತ್ತಮವಾಗಿರುತ್ತದೆ. ಲಸಿಕೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ್ದಲ್ಲ. ಅವು ಮಾನವೀಯತೆಗೆ ಸೇರಿದ್ದಾಗಿದೆ. ಶೀಘ್ರದಲ್ಲೇ ಬಡವರಿಗೂ ಲಸಿಕೆ ಹಾಕುತ್ತೇವೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.