ADVERTISEMENT

ಕೋವಿಡ್‌ನ ಮೂರನೇ ಅಲೆಗೆ ನಾವು ಸಿದ್ಧರಾಗಬೇಕಿದೆ: ತಜ್ಞರ ಎಚ್ಚರಿಕೆ

ಪಿಟಿಐ
Published 9 ಮೇ 2021, 9:33 IST
Last Updated 9 ಮೇ 2021, 9:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:‘ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯು ತೀವ್ರವಾಗಿದೆ. ಈ ನಡುವೆ ಸೋಂಕಿನ ಮೂರನೇ ಅಲೆಯ ಬಗ್ಗೆ ಜನರಲ್ಲಿ ಆತಂಕವೂ ಇನ್ನಷ್ಟು ಹೆಚ್ಚಾಗಿದೆ. ಆದರೆ ಸರಿಯಾದ ರೀತಿಯಲ್ಲಿ ಕೋವಿಡ್‌ ಮಾರ್ಗಸೂಚಿಯನ್ನು ಪಾಲಿಸಿದರೆ ಮತ್ತು ಲಸಿಕೆಯನ್ನು ಪಡೆದರೆ ಮೂರನೇ ಅಲೆಯ ತೀವ್ರತೆಯು ಕಡಿಮೆ ಇರಬಹುದು’ ಎಂದು ತಜ್ಞರು ಹೇಳಿದ್ದಾರೆ.

ಮೊದಲನೇ ಅಲೆಯನ್ನು ತಡೆಯಲು ಪಾಲಿಸಿದ ಸಾಧಾರಣ ಕ್ರಮಗಳು, ಎರಡನೇ ಅಲೆ ತೀವ್ರಗೊಳ್ಳಲು ಕಾರಣವಾಗಿರಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.

‘ಕೋವಿಡ್‌ನ ಹೊಸ ಅಲೆಗಾಗಿ ನಾವು ಸಿದ್ಧರಾಗಿರಬೇಕು. ಮುನ್ನೆಚ್ಚರಿಕಾ ಕ್ರಮಗಳು, ಕಣ್ಗಾವಲು, ನಿಯಂತ್ರಣ ಕ್ರಮಗಳು, ಚಿಕಿತ್ಸೆ ಮತ್ತು ಪರೀಕ್ಷೆಯ ಬಗ್ಗೆ ನಿಗದಿತ ಮಾರ್ಗಸೂಚಿಗಳನ್ನು ಅನುಸರಿಸಿದರೆ ಲಕ್ಷಣರಹಿತ ಸೋಂಕಿನ ಪ್ರಸರಣವನ್ನು ತಡೆಯಬಹುದು’ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯ ರಾಘವನ್ ಅವರು ಅಭಿಪ್ರಾಯಪಟ್ಟಿದ್ಧಾರೆ.

ADVERTISEMENT

‘ಜನರಲ್ಲಿ ನೈಸರ್ಗಿಕವಾಗಿ ಮತ್ತು ಲಸಿಕೆಯ ಮೂಲಕ ಅಭಿವೃದ್ದಿಗೊಳ್ಳುವ ರೋಗನಿರೋಧಕ ಶಕ್ತಿಯು ಕೆಲವು ತಿಂಗಳಿನಲ್ಲಿ ಕಡಿಮೆಯಾಗಬಹುದು. ಆಗ ವೈರಸ್‌ ಮತ್ತೆ ದಾಳಿ ಮಾಡಬಹುದು. ಹಾಗಾಗಿ ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ, ತಮ್ಮನ್ನು ತಾವು ರಕ್ಷಿಸಿದರೆ ಮಾತ್ರ ಸೋಂಕಿನಿಂದ ದೂರವಿರಬಹುದಾಗಿದೆ’ ಎಂದು ತಜ್ಞರು ಹೇಳಿದ್ದಾರೆ.

‘ಈ ವರ್ಷದ ಆರಂಭದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿದ್ದಾಗ ಜನರು ವೈರಸ್‌ ಇಲ್ಲವೇ ಎಂಬ ರೀತಿಯಲ್ಲಿ ಓಡಾಡಲು ಆರಂಭಿಸಿದರು. ಜನರು ಗುಂಪುಗೂಡುವುದು, ಮಾಸ್ಕ್‌ ಧರಿಸದೇ ಓಡಾಡುವ ಮೂಲಕ ವೈರಸ್‌ಗೆ ಹರಡಲು ಅವಕಾಶ ಕಲ್ಪಿಸಿಕೊಟ್ಟರು’ ಎಂದು ನವದೆಹಲಿಯ ಇನ್‌ಸ್ಟಿಟ್ಯೂಟ್‌ ಆಫ್ ಜೀನೋಮಿಕ್ಸ್ ಮತ್ತು ಇಂಟೆಗ್ರಲ್‌ ಬಯಾಲಜಿಯ ನಿರ್ದೇಶಕ ಡಾ.ಅನುರಾಗ್‌ ಅಗರ್‌ವಾಲ್‌ ಅವರು ತಿಳಿಸಿದರು.

‘ಕೋವಿಡ್‌ ವಿರುದ್ಧದ ಸೂಕ್ತ ಮಾರ್ಗಸೂಚಿಗಳು ನಮ್ಮನ್ನು ಸೋಂಕಿನಿಂದ ರಕ್ಷಿಸುತ್ತದೆ. ಹಾಗಾಗಿ ಮೂರು ಪದರು ಇರುವ ಮಾಸ್ಕ್‌ಗಳನ್ನುಧರಿಸುವುದು, ಆಗಾಗ ಕೈಗಳನ್ನು ಶುಚಿಗೊಳಿಸುವುದು, ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು, ಜನಸಂದಣಿಯಿಂದ ದೂರವಿರುವುದು ಸೇರಿದಂತೆ ಇತರೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಸುರಕ್ಷಿತರಾಗಿರಿ ’ ಎಂದು ಎನ್‌ಐಐಆರ್‌ಎನ್‌ಸಿಡಿಯ ವೈದ್ಯ ಡಾ.ಅರುಣ್‌ ಶರ್ಮಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.