ನವದೆಹಲಿ: ಕೊರೊನಾ ವೈರಸ್ನ ರೂಪಾಂತರ ತಳಿ ‘ಓಮಿಕ್ರಾನ್’ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಓಮಿಕ್ರಾನ್ ಆತಂಕಕಾರಿಯಾಗಿದ್ದು, ದೇಶದ ಜನರಿಗೆ ಲಸಿಕೆ ಭದ್ರತೆಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆಅವರು ಒತ್ತಾಯಿಸಿದ್ದಾರೆ.
ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು, ‘ಹೊಸ ರೂಪಾಂತರವು ಅಪಾಯಕಾರಿಯಾಗಿದೆ. ದೇಶದ ಜನರಿಗೆ ಕೋವಿಡ್ ಲಸಿಕೆಯ ಭದ್ರತೆಯನ್ನು ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ಗಂಭೀರವಾಗಬೇಕು. ಇದು ತುಂಬಾ ಮಹತ್ವದ ಸಮಯವಾಗಿದೆ‘ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಲಸಿಕೆ ಹಂಚಿಕೆಯ ಬಗೆಗಿನ ಅಂಕಿ–ಅಂಶಗಳ ಕುರಿತು ವಾಗ್ದಾಳಿ ನಡೆಸಿರುವ ಅವರು, ‘ಒಬ್ಬ ವ್ಯಕ್ತಿಯ ಫೋಟೋದ ಹಿಂದೆ ಈ ಅಂಕಿ–ಅಂಶಗಳನ್ನು ಹೆಚ್ಚು ಕಾಲ ಮರೆಮಾಚಲು ಸಾಧ್ಯವಿಲ್ಲ‘ ಎಂದು ಪ್ರಧಾನಿ ಮೋದಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವಿರುವ ಡೆಲ್ಟಾ ರೂಪಾಂತರ ತಳಿಗಿಂತಲೂ ವೇಗವಾಗಿ ಹರಡುವ ಸಾಮರ್ಥ್ಯ ‘ಓಮಿಕ್ರಾನ್’ ತಳಿಗೆ ಇದೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.
ಈ ವರೆಗೆ ದೇಶದಲ್ಲಿ ಕೋವಿಡ್ ಲಸಿಕೆಯ 120.96 ಕೋಟಿ ಡೋಸ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.