ನವದೆಹಲಿ: ದೇಶದಲ್ಲಿ ವ್ಯಾಪಕವಾಗುತ್ತಿರುವ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಲು ಪ್ರಧಾನಿ ಮೋದಿ ತೆರೆದಿರುವ 'ಪಿಎಂ-ಕೇರ್ಸ್' ನಿಧಿಗೆ ಕೋಟ್ಯಾಂತರ ರೂ.ಹಣ ಹರಿದು ಬರುತ್ತಿದೆ.
ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ– ಸಿಟಿಜನ್ ಅಸಿಸ್ಟೆನ್ಸ್ ಆ್ಯಂಡ್ ರಿಲೀಫ್ ಇನ್ ಎಮರ್ಜೆನ್ಸಿ ಸಿಚ್ಯುಯೇಷನ್ ಫಂಡ್ (ಕೇರ್ಸ್) ರಚಿಸಿರುವ ಕುರಿತು ಮೋದಿ ಶನಿವಾರ ತಿಳಿಸಿದ್ದರು. ಈ ನಿಧಿಗೆ ದೇಣಿಗೆ ನೀಡುವ ಮುಖಾಂತರ ಜನರು ಈ ಹೋರಾಟಕ್ಕೆ ಕೈಜೋಡಿಸಬಹುದು ಎಂದು ಅವರು ತಿಳಿಸಿದ್ದರು.
ಈ ಮನವಿಗೆ ರಾಷ್ಟ್ರಪತಿ ರಾಮ್ನಾಥ ಕೋವಿಂದ್ ಸೇರಿದಂತೆ ಸಿನೆಮಾ ನಟರು, ಕ್ರಿಕೆಟ್ ಆಟಗಾರರು ಹಾಗೂ ಜನಸಾಮಾನ್ಯರು ಕೈಜೋಡಿಸಿದ್ದಾರೆ.
'ಪಿಎಂ-ಕೇರ್ಸ್' ನಿಧಿಗೆ ₹501 ರು. ನೀಡಿದ್ದನ್ನು ಸಯ್ಯದ್ ಅತೂರ್ ರಹೆಮಾನ್ ಎಂಬುವವರು ಟ್ವಿಟ್ ಮೂಲಕ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ಮೋದಿಯವರ ಅಧಿಕೃತ ಖಾತೆಯಿಂದ ಪ್ರತಿಕ್ರಿಯೆ ನೀಡಲಾಗಿದ್ದು, 'ಕಡಿಮೆ ಮತ್ತು ದೊಡ್ಡ ಮೊತ್ತ ಅಂತೇನಿಲ್ಲ. ಇಲ್ಲಿ ಪ್ರತಿಯೊಬ್ಬರ ಕೊಡುಗೆ ಮುಖ್ಯವಾಗಿದೆ. ಇದು ನಮ್ಮ ಸಾಮೂಹಿಕ ಸಂಕಲ್ಪವನ್ನು ತೋರಿಸುತ್ತದೆ' ಎಂದಿದ್ದಾರೆ.
'ಪಿಎಂ-ಕೇರ್ಸ್' ನಿಧಿಗೆ ನಟ ಅಕ್ಷಯ್ ಕುಮಾರ್ ಅವರು ಶನಿವಾರ ₹25 ಕೋಟಿ ನೀಡುವುದಾಗಿ ಘೋಷಿಸಿದ್ದನ್ನು ಇಲ್ಲಿ ನೆನಸಿಕೊಳ್ಳಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.