ADVERTISEMENT

ಉತ್ತರಾಖಂಡ: ಹೊಸ ನೇಮಕಾತಿಗಳಿಗೆ ತಡೆ; ನೌಕರರಿಗೆ ವೇತನ ಹೆಚ್ಚಳವಿಲ್ಲ

ಕೋವಿಡ್‌ ಹಿನ್ನೆಲೆಯಲ್ಲಿ ವೆಚ್ಚ ಕಡಿತಕ್ಕೆ ಮುಂದಾದ ಸರ್ಕಾರ

ಪಿಟಿಐ
Published 11 ಜೂನ್ 2020, 9:04 IST
Last Updated 11 ಜೂನ್ 2020, 9:04 IST

ಡೆಹ್ರಾಡೂನ್‌: ಕೋವಿಡ್‌-19 ಮತ್ತು ಲಾಕ್‌ಡೌನ್‌ನಿಂದಆಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಲು ಉತ್ತರಾಖಂಡ ಸರ್ಕಾರವು ಆರೋಗ್ಯ ಮತ್ತು ಪೊಲೀಸ್ ಹೊರತುಪಡಿಸಿ ಇತರ ಇಲಾಖೆಗಳಲ್ಲಿ ನೌಕರರಿಗೆ ವೇತನ ಹೆಚ್ಚಳ ಮಾಡದಿರಲು ನಿರ್ಧರಿಸಿದೆ. ಅಲ್ಲದೆ ಈ ಇಲಾಖೆಗಳಲ್ಲಿ ಸದ್ಯಕ್ಕೆ ಹೊಸ ನೇಮಕಾತಿಯನ್ನೂ ಮಾಡಿಕೊಳ್ಳದಿರಲು ತೀರ್ಮಾನಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ಅವರು ವೆಚ್ಚ ಕಡಿತಕ್ಕೆ ಸಂಬಂಧಿಸಿದ ಆದೇಶ ಹೊರಡಿಸಿದ್ದಾರೆ.

ಸರ್ಕಾರಿ ಇಲಾಖೆಗಳಲ್ಲಿಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ಕಾರಣ ಅನಗತ್ಯ ಹುದ್ದೆಗಳನ್ನು ರದ್ದುಗೊಳಿಸಬೇಕು ಹಾಗೂ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಇತರ ಇಲಾಖೆಗಳಿಗೆ ಸ್ಥಳಾಂತರಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಸ್ಟೇಷನರಿ, ಪ್ರಯಾಣ ಮತ್ತು ಪೀಠೋಪಕರಣಗಳ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ಪ್ರಚಾರ, ಜಾಹೀರಾತು ಮತ್ತು ವಿದೇಶ ಪ್ರವಾಸಗಳಿಗೆ ನಿರ್ಬಂಧ ಹೇರಬೇಕು. ದಿನಚರಿ ಪುಸ್ತಕಗಳು, ದಿನದರ್ಶಿಗಳು ಮತ್ತು ಶುಭಾಶಯ ಪತ್ರಗಳನ್ನು ಖರೀದಿಸುವ ವೆಚ್ಚವನ್ನು ನಿಲ್ಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ವೇತನ ಹೆಚ್ಚಳಕ್ಕೆ ಕಾರಣವಾಗುವ ಬಡ್ತಿಗಳಿಗೆ ಅನುಮತಿ ನೀಡುವುದಿಲ್ಲ. ಭದ್ರತಾ ಉದ್ದೇಶಗಳಿಗೆ ಹೊರತುಪಡಿಸಿ ಇಲಾಖೆಗಳಿಂದ ವಾಹನಗಳ ಖರೀದಿಗೂ ಅನುಮತಿ ನೀಡುವುದಿಲ್ಲ ಎಂದು ಹೇಳಲಾಗಿದೆ.

ಅಲ್ಲದೆ ಸರ್ಕಾರಿ ಕಾರ್ಯಾಗಾರಗಳು, ವಿಚಾರ ಸಂಕಿರಣ ಮತ್ತು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಹೋಟೆಲ್‌ಗಳಲ್ಲಿ ಮಾಡುವಂತಿಲ್ಲ. ಬದಲಿಗೆ ಸರ್ಕಾರಿ ಕಟ್ಟಡಗಳಲ್ಲಿಯೇ ಅವುಗಳನ್ನು ಆಯೋಜಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.