ADVERTISEMENT

ಆಭರಣ ಅಂಗಡಿಗೆ ಕನ್ನ: ₹25 ಕೋಟಿ ಮೌಲ್ಯದ ಚಿನ್ನ ಕದ್ದು ಪರಾರಿಯಾದ ಖದೀಮರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2023, 10:43 IST
Last Updated 26 ಸೆಪ್ಟೆಂಬರ್ 2023, 10:43 IST
ಒಡವೆ
ಒಡವೆ   

ನವದೆಹಲಿ: ಆಭರಣದ ಅಂಗಡಿಯೊಂದರ ಗೋಡೆ ಕೊರೆದು ಸುಮಾರು ₹20–25 ಕೋಟಿ ಬೆಲೆಬಾಳುವ ಒಡವೆಗಳನ್ನು ದುಷ್ಕರ್ಮಿಗಳು ಕದ್ದು ಪರಾರಿಯಾದ ಘಟನೆ ದೆಹಲಿಯ ಜಂಗ್‌ಪುರದಲ್ಲಿ ನಡೆದಿದೆ.

ಸಂಜಯ್‌ ಜೈನ್‌ ಎನ್ನುವವರಿಗೆ ಸೇರಿದ ಬಂಗಾರದ ಅಂಗಡಿಯನ್ನು ಭಾನುವಾರ ಸಂಜೆಯಿಂದ ಸೋಮವಾರ (ಸೆ.25)ರವರೆಗೆ ಬಂದ್‌ ಮಾಡಲಾಗಿತ್ತು. ಈ ಅವಧಿಯಲ್ಲಿ ಕಳ್ಳತನ ನಡೆದಿದ್ದು, ಸೋಮವಾರ ಬೆಳಿಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. 

ಅಂಗಡಿಯ ಕಟ್ಟಡದ ಟೆರೆಸ್‌ ಮೂಲಕ ಕಳ್ಳರು ನೆಲ ಮಹಡಿಗೆ ಬಂದಿದ್ದಾರೆ. ನಂತರ ಆಭರಣಗಳನ್ನು ಇರಿಸಿದ್ದ ಲಾಕರ್‌ ರೂಮ್‌ನ ಸಿಸಿಟಿವಿ ಸಂಪರ್ಕವನ್ನು ಕಡಿತಗೊಳಿಸಿ, ಡ್ರಿಲ್‌ ಮಷಿನ್‌ನಲ್ಲಿ ಲಾಕ್‌ ರೂಮ್‌ನ ಗೋಡೆಯನ್ನು ಕೊರೆದು ಒಡವೆಗಳನ್ನು ದೋಚಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಲಾಕ್‌ರೂಮ್‌ ಮಾತ್ರವಲ್ಲದೆ ಅಂಗಡಿಯಲ್ಲಿ ಪ್ರದರ್ಶನಕ್ಕೆ ಇರಿಸಿದ್ದ ಆಭರಣಗಳನ್ನು ದೋಚಿದ್ದಾರೆ.

ಸದ್ಯ ಪೊಲೀಸರು ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ಕಲೆಹಾಕಿ ತನಿಖೆ ಆರಂಭಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.