ADVERTISEMENT

ಹಡಗಿನಲ್ಲಿ ಡ್ರಗ್ಸ್‌: ಕೇವಲ ವಾಟ್ಸಾಪ್‌ ಮಾತುಕತೆ ಸಾಕ್ಷಿ ಆಗುವುದಿಲ್ಲ; ನ್ಯಾಯಾಲಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 8:35 IST
Last Updated 1 ನವೆಂಬರ್ 2021, 8:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆಚಿತ್‌ ಕುಮಾರ್‌ ಅವರು ನಟ ಶಾರುಖ್‌ಖಾನ್‌ ಮಗ ಆರ್ಯನ್‌ ಖಾನ್‌ ಅವರಿಗೆ ಡ್ರಗ್ಸ್‌ ಪೂರೈಕೆ ಮಾಡಿದ್ದಾರೆ ಎಂಬುದನ್ನು ಕೇವಲ ವಾಟ್ಸಾಪ್‌ ಮಾತುಕತೆಗಳ ಆಧಾರದಲ್ಲಿ ಹೇಳಲು ಆಗುವುದಿಲ್ಲ ಎಂದು ಇಲ್ಲಿಯ ವಿಶೇಷ ನ್ಯಾಯಾಲಯ ಕಳೆದ ವಾರ ತನ್ನ ಆದೇಶದಲ್ಲಿ ಹೇಳಿದೆ.

ನ್ಯಾಯಾಲಯ ತನ್ನ ವಿಸ್ತೃತ ಆದೇಶದಲ್ಲಿ ಈ ಹೇಳಿಕೆ ನೀಡಿದ್ದು, ಇದರ ನಕಲು ಪ್ರತಿ ಭಾನುವಾರ ಲಭ್ಯವಾಗಿದೆ.

ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣದಲ್ಲಿ ಕೇವಲ ವಾಟ್ಸಾಪ್‌ ಮಾತುಕತೆಗಳು ಮಾತ್ರ ಪ್ರಮುಖ ಆರೋಪಿಗಳಾದ ಬಾಲಿವುಡ್‌ ನಟ ಶಾರುಕ್‌ ಖಾನ್ ಪುತ್ರ ಆರ್ಯನ್‌ ಖಾನ್‌ ಮತ್ತು ಅರ್ಬಾಜ್‌ ಮರ್ಚೆಂಟ್‌ ಅವರಿಗೆಆರೋಪಿ ಆಚಿತ್‌ ಕುಮಾರ್‌ ಡ್ರಗ್ಸ್‌ ಪೂರೈಕೆ ಮಾಡಿದ್ದ ಎಂಬುದಕ್ಕೆ ಸಾಕ್ಷಿಯಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ADVERTISEMENT

ಪ್ರಕರಣದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ (ಎನ್‌ಸಿಬಿ) ದಾಖಲೆಗಳ ಸತ್ಯಾಸತ್ಯತೆಯ ಬಗ್ಗೆ ನ್ಯಾಯಾಲಯ ಪ್ರಶ್ನಿಸಿದ್ದು ದಾಖಲೆಗಳನ್ನು ಸೃಷ್ಟಿಸಲಾಗಿದ್ದು ಅವು ಅನುಮಾನಾಸ್ಪದವೆಂದು ತೋರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿ.ವಿ.ಪಾಟೀಲ್‌ ಶನಿವಾರ ಆಚಿತ್‌ ಕುಮಾರ್‌ಗೆ ಜಾಮೀನು ಮಂಜೂರು ಮಾಡಿದ್ದರು.

ಆರ್ಯನ್‌ ಖಾನ್‌ ಜೊತೆಗಿನ ಮಾತುಕತೆ ಹೊರತುಪಡಿಸಿ ಕುಮಾರ್‌ ಡ್ರಗ್ಸ್‌ ಪೂರೈಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತನ್ನ ವಿವರವಾದ ಆದೇಶದಲ್ಲಿ ಹೇಳಿದೆ.

‘ಆರೋಪಿಗಳಾದ ಆರ್ಯನ್‌ ಖಾನ್‌ ಮತ್ತು ಅರ್ಬಾಜ್‌ ಮರ್ಚೆಂಟ್‌, ವಿಶೇಷವಾಗಿ ಆರ್ಯನ್‌ ಜೊತೆಅರ್ಜಿದಾರರು (ಆಚಿತ್‌ ಕುಮಾರ್‌) ನಡೆಸಿದವಾಟ್ಸಾಪ್‌ ಮಾತುಕತೆಗಳ ಆಧಾರದ ಮೇಲೆ ಮಾತ್ರ ಅವರು ಡ್ರಗ್ಸ್‌ ಪೂರೈಸುತ್ತಿದ್ದರು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಅವರು ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದಾರೆ’ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

‘ಅರ್ಜಿದಾರ (ಆಚಿತ್‌ ಕುಮಾರ್‌) ಆರೋಪಿಗಳಿಗೆ ಅಥವಾ ಇತರರಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಎಂಬುದಕ್ಕೆ ದಾಖಲೆಗಳಲ್ಲಿ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಅವರು ಜಾಮೀನಿಗೆ ಅರ್ಹವಾಗಿದ್ದಾರೆ’ ಎಂದೂ ಅದು ಹೇಳಿದೆ.

ಆರ್ಯನ್‌ ಖಾನ್‌ ಮತ್ತು ಆಚಿತ್‌ ಕುಮಾರ್‌ ನಡುವೆ ಪಿತೂರಿ ನಡೆದಿದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ. ಆರ್ಯನ್‌ ಖಾನ್‌ಗೆ ಜಾಮೀನು ನೀಡಿದರೆ, ಸಮಾನತೆ ಆಧಾರದಲ್ಲಿ ಆಚಿತ್‌ ಕುಮಾರ್‌ ಅವರನ್ನೂ ಬಿಡುಗಡೆ ಮಾಡಬಹುದು ಎಂದೂ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.