ADVERTISEMENT

‘ನಿವಾರ್’ ಚಂಡಮಾರುತ: ಚೆನ್ನೈನಲ್ಲಿ ಭಾರಿ ಮಳೆ, ವಿಮಾನ - ರೈಲು ಸಂಚಾರಕ್ಕೆ ಅಡ್ಡಿ

ಏಜೆನ್ಸೀಸ್
Published 25 ನವೆಂಬರ್ 2020, 10:20 IST
Last Updated 25 ನವೆಂಬರ್ 2020, 10:20 IST
ಚೆನ್ನೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಾವೃತಗೊಂಡಿರುವ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು – ಎಎಫ್‌ಪಿ ಚಿತ್ರ
ಚೆನ್ನೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ಜಲಾವೃತಗೊಂಡಿರುವ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ನಡೆದುಕೊಂಡು ಹೋಗುತ್ತಿರುವುದು – ಎಎಫ್‌ಪಿ ಚಿತ್ರ   

ಚೆನ್ನೈ: ‘ನಿವಾರ್’ ಚಂಡಮಾರುತದ ವೇಗ ಹೆಚ್ಚಾಗಿದ್ದು, ಬುಧವಾರ ರಾತ್ರಿ ಅಥವಾ ಗುರುವಾರ ನಸುಕಿನಲ್ಲಿ ಪುದುಚೇರಿ ಕರಾವಳಿ ಹಾದುಹೋಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಚಂಡಮಾರುತದ ಪರಿಣಾಮ ಚೆನ್ನೈಯಲ್ಲಿ ಭಾರಿ ಮಳೆಯಾಗುತ್ತಿದ್ದು, ವಿಮಾನ ಹಾರಾಟ ಮತ್ತು ರೈಲು ಸಂಚಾರಕ್ಕೆ ಅಡ್ಡಿಯಾಗಿದೆ. ಇಂದು (ಬುಧವಾರ) ಎರಡು ರೈಲುಗಳ ಸಂಚಾರ ಸಂಪೂರ್ಣ ರದ್ದುಗೊಳಿಸಲಾಗಿದೆ. ಗುರುವಾರ ಏಳು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಐದು ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

ತಾಂಜಾವೂರ್, ತಿರುವಾರೂರ್, ನಾಗಪಟ್ಟಿಣಂ, ಕುದ್ದಲೋರ್, ಚೆನ್ನೈ, ಕಂಚೀಪುರಂ, ಚೆಂಗಲಪಟ್ಟು ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚೆನ್ನೈಯಿಂದ ತೆರಳಬೇಕಿದ್ದ 26 ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಚೆನ್ನೈ ವಿಮಾನ ನಿಲ್ದಾಣ ಆಡಳಿತ ತಿಳಿಸಿದೆ.

‘ಮನೆಯಲ್ಲೇ ಇರುವಂತೆ ಜನರಿಗೆ ಸೂಚಿಸಲಾಗಿದೆ. ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಸೂಚಿಸಲಾಗಿದೆ. ಆಹಾರ, ಔಷಧ ವಿತರಣೆಗೆ 80 ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಈಗಾಗಲೇ ಒಟ್ಟು 24 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದ್ದು 987 ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಚಂಡಮಾರುತದ ಸ್ವರೂಪ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.