ADVERTISEMENT

ತೌತೆ ಚಂಡಮಾರುತ: ಮಹಾರಾಷ್ಟ್ರ, ಗುಜರಾತ್‌ ತತ್ತರ, 33 ಸಾವು

ಸಾವಿರಾರು ಮನೆಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 20:10 IST
Last Updated 18 ಮೇ 2021, 20:10 IST
ಮುಂಬೈನಲ್ಲಿ ಚಂಡಮಾರುತದ ಹೊಡೆತಕ್ಕೆ ಮರ ಧರೆಗುರುಳಿದ್ದರಿಂದ ಕಾರುಗಳು ಜಖಂಡಗೊಂಡವು–ಪಿಟಿಐ ಚಿತ್ರ
ಮುಂಬೈನಲ್ಲಿ ಚಂಡಮಾರುತದ ಹೊಡೆತಕ್ಕೆ ಮರ ಧರೆಗುರುಳಿದ್ದರಿಂದ ಕಾರುಗಳು ಜಖಂಡಗೊಂಡವು–ಪಿಟಿಐ ಚಿತ್ರ   

ಮುಂಬೈ/ಅಹಮದಾಬಾದ್‌:ತೌತೆ ಚಂಡಮಾರುತವು ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಎರಡೂ ರಾಜ್ಯಗಳಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ.

ಮಂಗಳವಾರ, ಮಹಾರಾಷ್ಟ್ರ ಕರಾವಳಿಯಲ್ಲಿ ಚಂಡಮಾರುತದ ಪರಿಣಾಮ ಗಾಳಿಗೆ ಎದ್ದ ಸಮುದ್ರದ ದೈತ್ಯ ಅಲೆಗಳು ಗೇಟ್‌ವೇ ಆಫ್ ಇಂಡಿಯಾ, ಚೌಪಾಟಿ ಮತ್ತು ಮೆರಿನ್‌ ಡ್ರೈವ್ ಪ್ರದೇಶದಲ್ಲಿ ಟನ್‌ಗಟ್ಟಲೆ ಕಸವನ್ನು ತಂದುಹಾಕಿವೆ. ಇದರ ವಿಡಿಯೊಗಳು ವೈರಲ್ ಆಗಿವೆ. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ತಿಳಿಸಿದ್ದಾರೆ.

ಗೇಟ್‌ವೇ ಆಫ್‌ ಇಂಡಿಯಾ ಬಳಿ ಸಮುದ್ರಕ್ಕೆ ಮುಖಮಾಡಿರುವ ಸುರಕ್ಷತಾ ಗೋಡೆ ಮತ್ತು ಕಬ್ಬಿಣದ ಗೇಟ್‌ಗಳನ್ನು ಚಂಡಮಾರುತ ಹಾನಿಗೊಳಿಸಿದೆ. ಗಾಳಿಯ ಹೊಡೆತಕ್ಕೆ ಸುತ್ತಮುತ್ತಲಿನ ಕೆಲವು ಕಲ್ಲುಗಳು ಸಹ ಸ್ಥಳಾಂತರಗೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಐತಿಹಾಸಿಕ ಸ್ಮಾರಕದ ಮುಖ್ಯ ರಚನೆಗೆ ಯಾವುದೇ ಹಾನಿಯಾಗಿಲ್ಲ. ಆದರೆ ಅದರ ಸಮೀಪವಿರುವ ಫುಟ್‌ಪಾತ್‌ನ ಒಂದು ಭಾಗ ಹಾನಿಗೊಂಡಿದೆ.

ನಿರೀಕ್ಷೆಯಂತೆ, ಸೌರಾಷ್ಟ್ರ ಕರಾವಳಿಯ ಮೂಲಕ ತೌತೆ ಚಂಡಮಾರುತವುಸೋಮವಾರ ಮಧ್ಯರಾತ್ರಿ ಗುಜರಾತ್ ಪ್ರವೇಶಿಸಿತು. ನೆಲಪ್ರವೇಶದ ನಂತರ ಚಂಡಮಾರುತದ ತೀವ್ರತೆ ಕಡಿಮೆಯಾಗಿದೆ. ನೆಲ ಪ್ರವೇಶಿಸುವಾಗ ಗಾಳಿಯು ಪ್ರತಿಗಂಟೆಗೆ 150-170 ಕಿ.ಮೀ. ವೇಗದಲ್ಲಿ ಬೀಸುತ್ತಿತ್ತು. ಮಂಗಳವಾರ ಮಧ್ಯಾಹ್ನದ ವೇಳೆಗೆ 120 ಕಿ.ಮೀ. ವೇಗಕ್ಕೆ ಕುಸಿದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ತೌತೆ ಚಂಡಮಾರುತವು ಇತ್ತೀಚಿನ ದಶಕಗಳಲ್ಲಿಯೇ ಅತ್ಯಂತ ತೀವ್ರವಾದುದಾಗಿತ್ತು. ಆದರೆ, ಅತ್ಯುತ್ತಮ ಮುನ್ಸೂಚನೆ ವ್ಯವಸ್ಥೆಯಿಂದಾಗಿ ಅಪಾಯದ ಪ್ರದೇಶದಲ್ಲಿದ್ದ ಸುಮಾರು ಎರಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ಹಾಗಾಗಿ, ಸಾವು ನೋವಿನ ಪ್ರಮಾಣ ಗಣನೀಯವಾಗಿ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.