ಮುಂಬೈ: ಕೆಲ ತಿಂಗಳು ಹಿಂದೆ ಮಹಾರಾಷ್ಟ್ರ ಪೊಲೀಸರು ವಶಪಡಿಸಿಕೊಂಡಿದ್ದ ನೈಸರ್ಗಿಕ ಯುರೇನಿಯಂ ಕುರಿತು ಅಣು ಶಕ್ತಿ ಇಲಾಖೆಯು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಗೆ (ಐಎಇಎ) ಮಾಹಿತಿ ನೀಡಿದೆ.
ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಪೊಲೀಸರು ಇಬ್ಬರನ್ನು ಬಂಧಿಸಿ ₹21.30 ಕೋಟಿ ಮೌಲ್ಯದ 7.1 ಕೆ.ಜಿಯಷ್ಟು ನೈಸರ್ಗಿಕ ಯುರೇನಿಯಂ ವಶಪಡಿಸಿಕೊಂಡಿದ್ದರು.
ಠಾಣೆ ನಿವಾಸಿ ಜಿಗರ್ ಜಯೇಶ್ ಪಾಂಡ್ಯ (27) ಮತ್ತು ಮಾನ್ಖರ್ಡ್ ನಿವಾಸಿ ಅಬು ತಾಹಿರ್ ಹುಸೇನ್ ಚೌಧರಿ (31) ಬಂಧಿತ ಆರೋಪಿಗಳು.
ಎಟಿಎಸ್ ವಶಪಡಿಸಿಕೊಂಡಿದ್ದ ವಸ್ತು ನೈಸರ್ಗಿಕ ಯುರೇನಿಯಂ ಎಂದು ಬಾಬಾ ಪರಮಾಣು ಸಂಶೋಧನಾ ಕೇಂದ್ರ (ಬಿಎಆರ್ಸಿ) ಖಚಿತಪಡಿಸಿತ್ತು. ಸದ್ಯ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಹಿಸಿಕೊಂಡಿದೆ.ವಶಪಡಿಸಿಕೊಂಡಿರುವ ನೈಸರ್ಗಿಕ ಯುರೇನಿಯಂ ಸದ್ಯ ಅಣು ಶಕ್ತಿ ಇಲಾಖೆಯ ಸುಪರ್ದಿಯಲ್ಲಿ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಕಳ್ಳಸಾಗಣೆ ದತ್ತಾಂಶ ಸಂಗ್ರಹ ವಿಭಾಗಕ್ಕೆ ವರದಿ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಣು ವಿದ್ಯುತ್ ಉತ್ಪಾದನೆ ಹಾಗೂ ಟೆಲಿಥೆರಪಿ ಘಟಕಗಳ ರಕ್ಷಾ ಕವಚಗಳಲ್ಲಿ ನೈಸರ್ಗಿಕ ಯುರೇನಿಯಂ ಅನ್ನು ಬಳಸಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.