ಪ್ರತಾಪಗಡ(ಉತ್ತರ ಪ್ರದೇಶ): ಕಳೆದ ವರ್ಷ ಇಲ್ಲಿ ನಡೆದ ದಾಳಿಯಲ್ಲಿ ವೃದ್ಧೆಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಿ, ಅವರ ಸಾವಿಗೆ ಕಾರಣರಾದ ಆರೋಪದ ಮೇಲೆ 12 ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕಮಲ್ ಸಿಂಗ್ ಅವರು ಬುಧವಾರ ಈ ಆದೇಶ ನೀಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.
‘ಕಳೆದ ವರ್ಷ ಸೆಪ್ಟೆಂಬರ್ 19ರ ರಾತ್ರಿ ನಮ್ಮ ತಂದೆ ಮಕ್ಬೂಲ್ ಅವರ ಮೇಲೆ ಪೊಲೀಸರು ಹಲ್ಲೆ ಮಾಡಿ, ಅವರ ಸಾವಿಗೆ ಕಾರಣರಾಗಿದ್ದಾರೆ‘ ಎಂದು ಆರೋಪಿಸಿ ಲಾಲ್ಗಂಜ್ ಕೊಟ್ವಾಲಿಯ ರಂಜಾನ್ ಖಾನ್ ಅವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ‘ಪೊಲೀಸರು ಒತ್ತಡದಿಂಲೇ ತಮ್ಮ ತಂದೆಯ ಅಂತಿಮ ಸಂಸ್ಕಾರ ನೆರವೇರಿಸು ವಂತಾಯಿತು ‘ ಎಂದು ದೂರಿನಲ್ಲಿ ಆರೋಪಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಅಂದಿನ ಸಂಗಿಪುರದ ಎಸ್ಎಚ್ಒ ಪ್ರಮೋದ್ ಸಿಂಗ್, ಸಬ್ ಇನ್ಸ್ಪೆಕ್ಟರ್ಗಳಾದ ರಾಮಧರ್ ಯಾದವ್, ಗಣೇಶ್ ದತ್ ಪಟೇಲ್, ಕಾನ್ಸ್ಟೆಬಲ್ಗಳಾದ ರಾಮ್ ಮಿಲನ್, ಶ್ರವಣ್ ಕುಮಾರ್, ರವಿಶಂಕರ್, ರಾಮ್ ನಿವಾಸ್ ಮತ್ತು ಹೆಸರಿಸದ ಐದು ಕಾನ್ಸ್ಟೆಬಲ್ಗಳ ಹೆಸರನ್ನು ಉಲ್ಲೇಖಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, 12 ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.