ADVERTISEMENT

ಅಂತರರಾಷ್ಟ್ರೀಯ ಕಾಯ್ದೆ ಪಾಲನೆ: ನಿಲುವು ಪುನರುಚ್ಚರಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 15:32 IST
Last Updated 16 ನವೆಂಬರ್ 2023, 15:32 IST
ರಾಜನಾಥ ಸಿಂಗ್
ರಾಜನಾಥ ಸಿಂಗ್   

ನವದೆಹಲಿ: ‘ನಿರ್ದಿಷ್ಟ ವಾಯುಪ್ರದೇಶದಲ್ಲಿ ವಿಮಾನಯಾನ, ಅಂತರರಾಷ್ಟ್ರೀಯ ನೀರಿನ ವಿಷಯದಲ್ಲಿ ತಡೆಯಿಲ್ಲದ ಕಾನೂನುಬದ್ಧ ವಹಿವಾಟು ಕುರಿತ ನಿಲುವಿಗೆ ಭಾರತ ಬದ್ಧವಾಗಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಅತಿಕ್ರಮಣ ಮುಂದುವರಿಸಿದೆ ಎಂಬುದಕ್ಕೆ ಪ್ರತಿಯಾಗಿ ಕಮ್ಯುನಿಸ್ಟ್ ಪಕ್ಷದ ಹೆಸರು ಉಲ್ಲೇಖಿಸದೇ ಈ ಮಾತು ಹೆಳಿದರು. ಜಕಾರ್ತಾದಲ್ಲಿ ನಡೆದ 10ನೇ ಏಷಿಯನ್‌ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆಯಲ್ಲಿ ಅವರು ಮಾತನಾಡಿದರು.

ಸಮುದ್ರಗಡಿಯ ವಿವಾದಗಳನ್ನು ಇತ್ಯರ್ಥಪಡಿಸುವುದು ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ಕುರಿತ ಸಹಮತ ಮೂಡಿಸಲು ರಾಷ್ಟ್ರಗಳ ನಡುವೆ ಮಾತುಕತೆಗೆ ಉತ್ತೇಜನ ನೀಡುವುದು ಅಗತ್ಯ ಎಂದು ಸಿಂಗ್ ಒತ್ತಿಹೇಳಿದರು.

ADVERTISEMENT

ಸಮುದ್ರ ಕಾಯ್ದೆಗೆ ಸಂಬಂಧಿಸಿದ ವಿಶ್ವಸಂಸ್ಥೆ ಸಮಾವೇಶದ ನಿರ್ಣಯ (ಯುಎನ್‌ಸಿಎಲ್‌ಒಎಸ್‌) , ಅಂತರರಾಷ್ಟ್ರೀಯ ಕಾಯ್ದೆಗಳ ಪಾಲನೆಗೆ ಭಾರತ ಬದ್ಧವಾಗಿದೆ ಎಂದೂ ಹೇಳಿದರು. ದಕ್ಷಿಣ ಚೀನಾ ಸಮುದ್ರದಲ್ಲಿ ಗಡಿ ಕುರಿತ ಚೀನಾದ ಹಕ್ಕು ಪ್ರತಿಪಾದನೆ ಕುರಿತು ಹಲವು ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಹಿಂದೆಯೇ ಭಾರತವು ತನ್ನ ನಿಲುವು ಸ್ಪಷ್ಟಪಡಿಸಿದೆ.  

ಇದೇ ವೇಳೆ ಸಿಂಗ್ ಅವರು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಇಂಡೊನೇಷಿಯದ ರಕ್ಷಣಾ ಸಚಿವ ಪ್ರಬೊವೊ ಸುಬಿಯಾಂಟೊ, ವಿಯೆಟ್ನಾಂನ ಜನರಲ್‌ ಫಾನ್ ವಾನ್‌ ಗಿಯಾಂಗ್ ಅವರ ಜೊತೆಗೂ ರಕ್ಷಣಾ ಭಾಂಧವ್ಯವನ್ನು ಕುರಿತು ಚರ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.