ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ಹಿಂದುತ್ವದ ಹೇಳಿಕೆಯ ವಿರುದ್ಧ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್ ಠಾಕ್ರೆ ವಾಗ್ದಾಳಿ ನಡೆಸಿದ್ದು, ‘ಹಿಂದುತ್ವ ಬಟ್ಟೆ ತೊಳೆಯುವ ಪುಡಿಯೇ?’ ಎಂದು ಪ್ರಶ್ನೆ ಮಾಡಿದ್ಧಾರೆ.
ಕೆಲವು ದಿನಗಳ ಹಿಂದೆ ನಡೆದ ರ್ಯಾಲಿಯೊಂದರಲ್ಲಿ ಉದ್ಧವ್ ಅವರು, ‘ಬಿಜೆಪಿಯವರದು ನಕಲಿ ಹಿಂದುತ್ವ. ನಮ್ಮದು ಅಸಲಿ ಹಿಂದುತ್ವ’ ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ ಠಾಕ್ರೆ, ‘ನಾನು ಉದ್ಧವ್ ಅವರ ಭಾಷಣ ಕೇಳಿದ್ದೇನೆ. ಅವರು ನಮ್ಮದು ಅಸಲಿ ಹಿಂದುತ್ವ ಹಾಗೂ ಬಿಜೆಪಿಯವರದು ನಕಲಿ ಹಿಂದುತ್ವ ಎಂದು ಹೇಳಿದ್ದಾರೆ. ಆದರೆ ಹಿಂದುತ್ವ ಎಂಬುದು ಬಟ್ಟೆ ತೊಳೆಯುವ ಪುಡಿಯೇ? ಎಂದು ಕೇಳಿದ್ದಾರೆ.
ಅಯೋಧ್ಯೆ ಭೇಟಿ ಮೂಂದೂಡಿಕೆ: ಜೂನ್ 5ರತಮ್ಮ ಉದ್ಧೇಶಿತ ಅಯೋಧ್ಯೆಯ ಭೇಟಿಯ ಸುತ್ತ ರಾಜಕೀಯ ಬೆಳವಣಿಗೆಗಳಾಗುತ್ತಿದ್ದು, ಇವು ತಮ್ಮನ್ನು ಹಾಗೂ ತಮ್ಮ ಪಕ್ಷದ ಕಾರ್ಯಕರ್ತರನ್ನು ಕಾನೂನು ತೊಡಕುಗಳಲ್ಲಿ ಸಿಲುಕಿಸುವ ತಂತ್ರಗಳಾಗಿವೆ. ಈ ವಿವಾದಗಳಲ್ಲಿ ಸಿಕ್ಕಿಹಾಕಿಕೊಳ್ಳಬಾರದೆಂದು ಅಯೋಧ್ಯೆ ಭೇಟಿಯನ್ನು ಮುಂದೂಡಲು ನಿರ್ಧರಿಸಿದ್ದೇನೆ ಎಂದು ರಾಜ್ ಠಾಕ್ರೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.