ADVERTISEMENT

ದೆಹಲಿ | ಕಚೇರಿಯಲ್ಲೇ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ: ಹಂತಕರು ಪರಾರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಏಪ್ರಿಲ್ 2023, 11:20 IST
Last Updated 15 ಏಪ್ರಿಲ್ 2023, 11:20 IST
ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಲ ಅವರು ಕುಸಿದು ಬಿದ್ದಿರುವ ದೃಶ್ಯ
ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಲ ಅವರು ಕುಸಿದು ಬಿದ್ದಿರುವ ದೃಶ್ಯ   

ನವದೆಹಲಿ: ದೆಹಲಿ ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಲ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಾರಕಾದಲ್ಲಿನ ಕಚೇರಿಯಲ್ಲಿ ಸುರೇಂದ್ರ ಮಟಿಯಾಲ ಮತ್ತು ಅವರ ಸೋದರಳಿಯ ಶುಕ್ರವಾರ ಸಂಜೆ 7:30ರ ಸುಮಾರಿಗೆ ಟಿವಿ ನೋಡುತ್ತಿದ್ದರು. ಇದೇ ಸಂದರ್ಭದಲ್ಲಿ ಮುಖವಾಡ ಧರಿಸಿದ್ದ ಇಬ್ಬರು ವ್ಯಕ್ತಿಗಳು ಕಚೇರಿಯೊಳಗೆ ನುಗ್ಗಿದ್ದು, ಮಟಿಯಾಲ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಮೇಲೆ ನಾಲ್ಕೈದು ಬಾರಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.

ಕೃತ್ಯದಲ್ಲಿ ಮೂವರು ಆರೋಪಿಗಳು ಭಾಗವಹಿಸಿದ್ದಾರೆ. ಇಬ್ಬರು ಆರೋಪಿಗಳು ಮಟಿಯಾಲರನ್ನು ಹತ್ಯೆ ಮಾಡುವುದಕ್ಕಾಗಿ ಕಚೇರಿಗೆ ಪ್ರವೇಶಿಸಿದರೆ, ಮತ್ತೊಬ್ಬ ಆರೋಪಿ ಕಚೇರಿ ಹೊರಗಡೆ ಬೈಕ್‌ನಲ್ಲಿ ಕಾಯುತ್ತಿದ್ದ. ಘಟನೆ ಬಳಿಕ ಮೂವರೂ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಟಿಯಾಲ ಅವರ ಕುಟುಂಬಸ್ಥರು ಯಾವುದೇ ಶಂಕಿತರನ್ನು ಹೆಸರಿಸದಿದ್ದರೂ, ಮಟಿಯಾಲ ಅವರು ಕೆಲವರೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಹಾಗಾಗಿ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ದ್ವಾರಕಾ ಉಪ ಪೊಲೀಸ್ ಆಯುಕ್ತ ಹರ್ಷ ವರ್ಧನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.