
ದೆಹಲಿ ಕಾರು ಸ್ಫೋಟದಲ್ಲಿ ಮೃತಪಟ್ಟ ಪಂಕಜ್ ಸಹಾನಿ ಅವರ ಮೃತದೇಹವನ್ನು ಕುಟುಂಬಸ್ಥರು ಪಡೆದರು
ಪಿಟಿಐ ಚಿತ್ರ
ನವದೆಹಲಿ/ ಮುಜಾಫರನಗರ: ದೆಹಲಿಯ ಕೆಂಪುಕೋಟೆ ಬಳಿ ಸೋಮವಾರ ನಡೆದ ಪ್ರಬಲ ಸ್ಫೋಟದಲ್ಲಿ ಮೃತಪಟ್ಟವರ ಪೈಕಿ ಯುವಕರು, ಟ್ಯಾಕ್ಸಿ ಚಾಲಕರು, ಕಂಡಕ್ಟರ್ ಸೇರಿದ್ದಾರೆ. ಕುಟುಂಬಕ್ಕೆ ಜೀವನಾಧಾರ ಆಗಿದ್ದವರನ್ನು ಕಳೆದುಕೊಂಡ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ದುರ್ಘಟನೆಯಲ್ಲಿ ಮೃತಪಟ್ಟವರ ಪೈಕಿ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಜಿಂಝಾನಾ ಪಟ್ಟಣದ 18 ವರ್ಷದ ಯುವಕ ನೌಮನ್ ಅನ್ಸಾರಿ ಸೇರಿದ್ದಾರೆ. ತನ್ನ ಅಂಗಡಿಗೆ ಸೌಂದರ್ಯವರ್ಧಕಗಳನ್ನು ಖರೀದಿಸಲು ಅವರು ತನ್ನ ಸೋದರ ಸಂಬಂಧಿ ಅಮನ್ ಜತೆ ದೆಹಲಿ ಬಂದಿದ್ದರು.
ಅನ್ಸಾರಿ ಕುಟುಂಬದ ಆಧಾರ ಸ್ತಂಭವಾಗಿದ್ದ ನೌಮನ್ ದುರ್ಘಟನೆಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಮನ್ ಗಾಯಗೊಂಡಿದ್ದು, ದೆಹಲಿಯ ಲೋಕನಾಯಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಚಿಕ್ಕಪ್ಪ ಫರ್ಕನ್ ತಿಳಿಸಿದರು.
ಟ್ಯಾಕ್ಸಿ ಚಾಲಕ ಪಂಕಜ್ ಸಹ್ನಿ (22) ಅವರೂ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ. ‘ಪಂಕಜ್ ಮೂರು ವರ್ಷಗಳಿಂದ ಟ್ಯಾಕ್ಸಿ ಓಡಿಸುತ್ತಿದ್ದರು’ ಎಂದು ಮಾಹಿತಿ ನೀಡಿದ ಅವರ ಸಂಬಂಧಿ ರಾಮದೇವ್ ಅವರು, ‘ದುರ್ಘಟನೆಯಲ್ಲಿ ಆತನ ತಲೆಯ ಹಿಂಭಾಗ ಛಿದ್ರವಾಗಿದೆ ಮತ್ತು ಆತ ಓಡಿಸುತ್ತಿದ್ದ ವ್ಯಾಗನಾರ್ ಕಾರು ಪೂರ್ಣವಾಗಿ ಹಾನಿಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ’ ಎಂದು ಕಣ್ಣೀರು ಹಾಕಿದರು.
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯವರಾದ, ದೆಹಲಿ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಡಿಟಿಸಿ) ಕಂಡಕ್ಟರ್ ಅಶೋಕ್ ಕುಮಾರ್ (34) ಅವರೂ ಈ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ.
ಮೃತರ ದೇಹಗಳನ್ನು ಪಡೆಯಲು ಅವರ ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಬಳಿ ಕಾಯುತ್ತ, ರೋದಿಸುತ್ತಿದ್ದ ದೃಶ್ಯಗಳು ಮನಕಲಕುವಂತಿದ್ದವು.
ಸದಾ ಜನದಟ್ಟಣೆಯಿಂದ ಕೂಡಿರುವ ಐತಿಹಾಸಿಕ ಕೆಂಪುಕೋಟೆಯ ಬಳಿ ಚಲಿಸುತ್ತಿದ್ದ ಹುಂಡೈ ಐ–20 ಕಾರಿನಲ್ಲಿ ಸೋಮವಾರ ಸಂಜೆ ಭಾರಿ ಸ್ಫೋಟ ಸಂಭವಿಸಿ 12 ಮಂದಿ ಮೃತಪಟ್ಟಿದ್ದಾರೆ. 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಘಟನೆಯ ಬಗ್ಗೆ ದೆಹಲಿ ಪೊಲೀಸರು ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯ್ದೆ (ಯುಎಪಿಎ) ಹಾಗೂ ಸ್ಫೋಟಕ ಕಾಯ್ದೆಯಡಿ ಎಫ್ಐಆರ್ ದಾಖಲಿಸಿದ್ದು ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಿದ ಗೃಹ ಸಚಿವ ಅಮಿತ್ ಶಾ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದ್ದಾರೆ.
‘ಸಾವನ್ನು ಹತ್ತಿರದಲ್ಲೇ ನೋಡಿದ್ದೇವೆ’
ನವದೆಹಲಿ (ಪಿಟಿಐ): ರಸ್ತೆಯಲ್ಲಿ ಎಲ್ಲೆಡೆ ರಕ್ತ ಚಲ್ಲಿತ್ತು, ಹಲವರು ಅಲ್ಲಿಯೇ ಬಿದ್ದಿದ್ದರು, ಕೆಲವರಿಗೆ ರಕ್ತ ಸುರಿಯುತ್ತಿತ್ತು, ಇನ್ನೂ ಕೆಲವರು ಏಳಲಾಗದ ಸ್ಥಿತಿಯಲ್ಲಿದ್ದರು...
ಕೆಂಪುಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಗಾಯಗೊಂಡು, ಲೋಕನಾಯಕ್ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮ್ ಪ್ರತಾಪ್ ಅವರು ಘಟನೆ ಮತ್ತು ಆನಂತರದ ದೃಶ್ಯಗಳನ್ನು ನೆನಪು ಮಾಡಿಕೊಂಡಿದ್ದು ಹೀಗೆ.
‘ನಾವು ಸಾವನ್ನು ಹತ್ತಿರದಿಂದ ನೋಡಿದ್ದೇವೆ’ ಎಂದು ಹೇಳುವಾಗ ಅವರು ಕಂಪಿಸುತ್ತಿದ್ದರು. ಅವರ ಬಲಗೈಗೆ ತೀವ್ರ ಗಾಯವಾಗಿದ್ದು, ಬಿಗಿಯಾಗಿ ಬ್ಯಾಂಡೇಜ್ ಸುತ್ತಲಾಗಿತ್ತು.
ದುರ್ಘಟನೆಯಲ್ಲಿ ಬದುಕುಳಿದಿರುವ ಪ್ರತಾಪ್ ಅವರು, ಬಿಹಾರ ಮೂಲದವರು. ಅವರು ರಸ್ತೆಬದಿಯ ತಿನಿಸು ಅಂಗಡಿಯೊಂದರ ಮಾಲೀಕರು. ‘ಕೆಲ ಗ್ರಾಹಕರಿದ್ದರು, ನಾನು ಅಂಗಡಿ ಮುಚ್ಚಲು ತಯಾರಿ ನಡೆಸುತ್ತಿದ್ದೆ. ಅಷ್ಟರಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟ ಸಂಭವಿಸಿತು. ಇದರಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಆವರಿಸಿತು. ಜನರ ಕಿರುಚಾಟ, ಚೀರಾಟ ಮುಗಿಲು ಮುಟ್ಟುವಂತಿತ್ತು’ ಎಂದು ಅವರು ವಿವರಿಸಿದರು.
‘ಕೆಲ ಕ್ಷಣ ಏನೂ ಕೇಳಿಸಲಿಲ್ಲ’
‘ಸ್ಫೋಟದ ತೀವ್ರತೆ ಎಷ್ಟಿತ್ತು ಎಂದರೆ, ಕೆಲ ಕ್ಷಣ ನನಗೆ ಏನೂ ಕೇಳಿಸಲಿಲ್ಲ. ಗಾಜಿನ ಚೂರುಗಳು ಮೈಮೇಲೆಲ್ಲ ಬಿದ್ದಿದ್ದವು. ನನ್ನ ಕೈಯಿಂದಲೂ ತೀವ್ರವಾಗಿ
ರಕ್ತಸ್ರಾವವಾಗುತ್ತಿತ್ತು. ಅದರ ಅರಿವು ನನಗೆ ಆಗ ಆಗಲಿಲ್ಲ. ಅಬ್ಬಾ... ಸಾವನ್ನು ಅಷ್ಟು ಹತ್ತಿರದಿಂದ ನೋಡಿದೆ’ ಎಂದು ಅವರು ಕಣ್ಣೀರಾದರು.
ಸ್ಫೋಟ ಸಂಭವಿಸಿದಾಗ ಕೆಲ ಮೀಟರ್ಗಳಷ್ಟು ದೂರದಲ್ಲಿದ್ದ ಪ್ರತಾಪ್ ಅವರ ಸಂಬಂಧಿಕ
ರೊಬ್ಬರು, ‘ಸ್ಫೋಟ ಆದಾಗ ಬೆಂಕಿ, ದಟ್ಟವಾದ ಹೊಗೆ ಆವರಿಸಿತು. ಎಲ್ಲವೂ ಕತ್ತಲಾಯಿತು. ನನಗೆ ದಿಕ್ಕೇ ತೋಚದಂತಾಯಿತು. ಸಹೋದರನ ಪತ್ತೆಯೂ ಸಾಧ್ಯವಾಗಲಿಲ್ಲ’ ಎಂದು ಹೇಳಿದರು.
‘ಜನರು ಹೆಸರುಗಳನ್ನು ಕೂಗುತ್ತಿದ್ದರು, ಅಳುತ್ತಿದ್ದರು, ಚೀರುತ್ತಿದ್ದರು. ಸಂಬಂಧಿಕರು, ಸ್ನೇಹಿತರಿಗಾಗಿ ಹುಡುಕುತ್ತಿದ್ದರು. ಯಾರು ಜೀವಂತ ಇದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ’ ಎಂದು ಅವರು ಮೆಲುಕುಹಾಕಿದರು.
‘ಬಟ್ಟೆಯೆಲ್ಲ ರಕ್ತಮಯ’
ದುರ್ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಟ್ಯಾಂಕರ್ ಮಾಲೀಕ ವಿಜೇಂದರ್ ಯಾದವ್ ಅವರು ಭಯಾನಕ ದೃಶ್ಯಗಳನ್ನು ವಿವರಿಸುವಾಗ ಭಯದಿಂದ ನಡುಗುತ್ತಿದ್ದರು. ‘ಪ್ರತಾಪ್ ಅವರ ಅಂಗಡಿ ಸಮೀಪ ನೀರಿನ ಟ್ಯಾಂಕರ್ ಅನ್ನು ನಿಲ್ಲಿಸಿದೆ. ಅಷ್ಟರಲ್ಲಿಯೇ ಭಾರಿ ಸ್ಫೋಟ ಸಂಭವಿಸಿತು. ಅದು ನನ್ನನ್ನು ನೆಲಕ್ಕೆ ಅಪ್ಪಳಿಸುವಂತೆ ಮಾಡಿತು. ಮೇಲೆದ್ದಾಗ ಬಟ್ಟೆ ಪೂರ್ಣ ರಕ್ತಮಯವಾಗಿತ್ತು. ರಸ್ತೆಯಲ್ಲಿ ಗಾಜಿನ ಪುಡಿಗಳು ಮತ್ತು ಹಲವರ ದೇಹದ ತುಂಡುಗಳು ಬಿದ್ದಿದ್ದವು. ಕೆಲವರು ಚೀರುತ್ತಾ ಓಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.
‘ಈ ದುರ್ಘಟನೆಯಲ್ಲಿ ನಾನು ಹೇಗೆ ಬದುಕುಳಿದಿರುವೆ ಎಂಬುದೇ ಆಶ್ಚರ್ಯವಾಗಿದೆ’ ಎಂದರು ಅವರು. ಅವರ ಕೈ ಮತ್ತು ತಲೆಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಹಾರದವರಾದ ಯಾದವ್ ಎರಡು ದಶಕಕ್ಕೂ ಹೆಚ್ಚುಕಾಲದಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಹಾರ ನಡೆಸುತ್ತಿದ್ದಾರೆ. ಅವರಿಗೆ ಪತ್ನಿ ಮತ್ತು ನಾಲ್ವರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.