ಸಾಂದರ್ಭಿಕ ಚಿತ್ರ
ನವದೆಹಲಿ: 15 ವರ್ಷದ ಬಾಲಕನಿಗೆ ಆತ ಓದುತ್ತಿದ್ದ ಶಾಲೆಯ ಹೊರಗೇ ಚಾಕುವಿನಿಂದ ಇರಿದಿರುವ ಪ್ರಕರಣ ಕೇಂದ್ರ ದೆಹಲಿಯ ಪಹರ್ಗಂಜ್ ಪ್ರದೇಶದಲ್ಲಿ ವರದಿಯಾಗಿದೆ. ಈ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮೂವರು ಬಾಲಕರನ್ನು ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಗುರುವಾರ (ಸೆಪ್ಟೆಂಬರ್ 4) ಈ ಘಟನೆ ನಡೆದಿದೆ. ಗಾಯಗೊಂಡಿದ್ದ ಬಾಲಕ, ಎದೆಯಲ್ಲಿ ಹೊಕ್ಕ ಚಾಕುವಿನೊಂದಿಗೇ ಪಹರ್ಗಂಜ್ ಠಾಣೆ ತಲುಪಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬಾಲಕನನ್ನು ಕೂಡಲೇ ಕಲಾವತಿ ಸರಣ್ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಆರ್ಎಂಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ಆತನ ಎದೆಯಿಂದ ಚಾಕುವನ್ನು ವೈದ್ಯರು ಹೊರ ತೆಗೆದಿದ್ದಾರೆ.
ಆರೋಪಿಗಳಲ್ಲಿ ಒಬ್ಬನಿಗೆ 10–15 ದಿನಗಳ ಹಿಂದೆ ಹಲವು ಬಾಲಕರು ಥಳಿಸಿದ್ದರು. ಸದ್ಯ ಚಾಕುವಿನಿಂದ ಇರಿತಕ್ಕೊಳಗಾಗಿರುವ ಬಾಲಕನೇ ಆ ಘಟನೆಗೆ (ಹಲ್ಲೆಗೆ) ಪ್ರಚೋದನೆ ನೀಡಿದ್ದ ಎಂಬುದಾಗಿ ಆರೋಪಿ ಶಂಕಿಸಿದ್ದ. ಸೇಡು ತೀರಿಸಿಕೊಳ್ಳುವುದಕ್ಕಾಗಿ ಇಬ್ಬರು ಸ್ನೇಹಿತರೊಂದಿಗೆ ಸಂತ್ರಸ್ತನ ಶಾಲೆಯ ಬಳಿ ತೆರಳಿದ್ದ. ಈ ವೇಳೆ, ಗೇಟ್ ಬಳಿಯೇ ಇರಿಯಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.
'ಆರೋಪಿಗಳಲ್ಲಿ ಒಬ್ಬ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ, ಇನ್ನಿಬ್ಬರು ಆತನನ್ನು ತಡೆದಿದ್ದಾರೆ. ದಾಳಿಗೂ ಮೊದಲು ಮತ್ತೊಬ್ಬ ಒಡೆದ ಬಿಯರ್ ಬಾಟಲಿಯಿಂದ ಚುಚ್ಚುವುದಾಗಿ ಬೆದರಿಸಿದ್ದ' ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ನಿಧಿನ್ ವಾಲ್ಸನ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಹರ್ಗಂಜ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯ ಗುಪ್ತಚರ ಮಾಹಿತಿ ಹಾಗೂ ಕೂಡಲೇ ನಡೆಸಿದ ಕಾರ್ಯಾಚರಣೆ ಪರಿಣಾಮವಾಗಿ, ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ, ಕೃತ್ಯದಲ್ಲಿ ಭಾಗಿಯಾದ 15 ಮತ್ತು 16 ವರ್ಷದ ಮೂವರನ್ನು ಅರಾಮ್ ಬಾಗ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಚಾಕು ಹಾಗೂ ಘಟನಾ ಸ್ಥಳದಲ್ಲಿ ಬಿಯರ್ ಬಾಟಲಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.