
ಕೆಂಪುಕೋಟೆಯಲ್ಲಿ ನಡೆದ ಬಾಂಬ್ ಸ್ಫೋಟದ ಬಳಿಕ ಜಮ್ಮು – ಶ್ರೀನಗರ ಹೆದ್ದಾರಿಯಲ್ಲಿ ಯೋಧರು ಗಸ್ತು ಕಾಯುತ್ತಿರುವುದು
–ಪಿಟಿಐ ಚಿತ್ರ
ಸಹರಾನ್ಪುರ, ಉತ್ತರಪ್ರದೇಶ: ಕೆಂಪುಕೋಟೆಯಲ್ಲಿ ಬಳಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಕಳೆದ ವಾರ ಬಂಧಿತನಾದ ಕಾಶ್ಮೀರದ ಯುವ ವೈದ್ಯ ಡಾ.ಆದಿಲ್ ಅಹ್ಮದ್, ಅಕ್ಟೋಬರ್ 31ರಂದು ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಿರುವ ವಿಮಾನದ ಟಿಕೆಟ್ ಪತ್ತೆಯಾಗಿದೆ.
ಸಹರಾನ್ಪುರದ ಅಂಬಾಲ ರಸ್ತೆಯಲ್ಲಿರುವ ಮಾನಕ್ಮೌನಲ್ಲಿರುವ ಅಮನ್ ವಿಹಾರ್ ಕಾಲೊನಿಯಲ್ಲಿರುವ ಬಾಡಿಗೆ ಮನೆಯ ಕಸದ ಬುಟ್ಟಿಯಲ್ಲಿ ಆದಿಲ್ ಹೆಸರಿನಲ್ಲಿ ಬುಕ್ಕಿಂಗ್ ಮಾಡಲಾದ ವಿಮಾನದ ಟಿಕೆಟ್ ಪತ್ತೆಯಾಗಿದೆ. ಮನೆಯ ಮೇಲೆ ಮೊಹರು (ಸೀಲ್) ಹಾಕಲಾಗಿದ್ದು, ಪೊಲೀಸರು ಪಹರೆ ಕಾಯುತ್ತಿದ್ದಾರೆ.
ಟಿಕೆಟ್ ಅನ್ನು ವಶಕ್ಕೆ ಪಡೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇದರಿಂದ, ಕೆಂಪುಕೋಟೆ ಬಳಿ ನಡೆದ ಸ್ಫೋಟಕ್ಕೂ, ಆತನ ಚಲನವಲನಗಳ ಮೇಲೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಆತ ದೆಹಲಿಯಲ್ಲಿ ಎಷ್ಟು ದಿನ ತಂಗಿದ್ದ ಹಾಗೂ ಯಾರನ್ನೆಲ್ಲಾ ಭೇಟಿಯಾಗಿದ್ದ ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.
‘ಆದಿಲ್ನನ್ನು ನವೆಂಬರ್ 6ರಂದು ಸಹರಾನ್ಪುರದಲ್ಲಿ ಬಂಧಿಸಲಾಗಿತ್ತು. ಆತನ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿದ ವೇಳೆ ಶ್ರೀನಗರದಿಂದ ದೆಹಲಿಗೆ ಅಕ್ಟೋಬರ್ 31ರವರೆಗೆ ಪ್ರಯಾಣಿಸಿದ್ದು ಖಾತರಿಯಾಗಿದೆ. ಕೆಂಪುಕೋಟೆ ಸ್ಫೋಟ ನಡೆದ ವಾರದ ಹಿಂದಷ್ಟೇ ಆತ ಭೇಟಿ ನೀಡಿರುವುದು ಕಂಡುಬಂದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆ, ಉತ್ತರ ಪ್ರದೇಶ ಹಾಗೂ ಕೇಂದ್ರಿಯ ತನಿಖಾ ಸಂಸ್ಥೆಯ ಅಧಿಕಾರಿಗಳು ಸಹರಾನ್ಪುರದಲ್ಲಿ ಬೀಡುಬಿಟ್ಟಿದ್ದು, ಆದಿಲ್ ಜೊತೆಗೆ ಸಂಪರ್ಕ ಹೊಂದಿರುವ ಸ್ಥಳೀಯರ ಸಂಪರ್ಕದ ಮಾಹಿತಿ, ಆತನ ಸಂವಹನ, ಬ್ಯಾಂಕ್ನ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಆದಿಲ್ ಎಂಬಿಬಿಎಸ್ ಹಾಗೂ ಎಂಡಿ ಮುಗಿಸಿದ್ದ. ಸಹರಾನ್ಪುರದ ಅಂಬಾಲ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ‘ಆತ ಶಾಂತ ಸ್ವಭಾವದನೂ ವೃತ್ತಿಪರನು ಆಗಿದ್ದ’ ಎಂದು ಆತನ ಸಹೋದ್ಯೋಗಿಗಳು ನೆನಪಿಸಿಕೊಳ್ಳುತ್ತಾರೆ. ‘ಡಾ.ಆದಿಲ್ ತನ್ನ ಕ್ಷೇತ್ರದಲ್ಲಿ ಅತ್ಯಂತ ಸಮರ್ಥ ಹೊಂದಿದ್ದ ವ್ಯಕ್ತಿಯಾಗಿದ್ದ. ವಿದ್ಯಾವಂತ ವ್ಯಕ್ತಿಯೇ ಇಂತಹ ನಾಚಿಕೆಗೇಡಿನ ವಿಚಾರದಲ್ಲಿ ಭಾಗಿಯಾಗಿರುವುದು ಅತ್ಯಂತ ಬೇಸರ ತರಿಸಿದೆ’ ಸಹೋದ್ಯೋಗಿ ಡಾ. ಬಾಬರ್ ಅಭಿಪ್ರಾಯಪಟ್ಟಿದ್ದಾರೆ. ‘ಆದಿಲ್ ಶಾಂತ ವ್ಯಕ್ತಿ. ಆದರೆ ರಾತ್ರಿ ವೇಳೆ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದರು. ಹಲವು ವಾಹನಗಳನ್ನು ಕೂಡ ಅವರ ಮನೆಗೆ ಹೊರಗಡೆ ನಿಲ್ಲಿಸಲಾಗುತ್ತಿತ್ತು’ ಎಂದು ನೆರೆಯವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.