ನವದೆಹಲಿ: ಕಾಲ್ಸೆಂಟರ್ ಉದ್ಯೋಗಿ, ಮುಂಬೈ ಮೂಲದ ಶ್ರದ್ಧಾ ವಾಲಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಂತಕ ಅಫ್ತಾಬ್ ಅಮೀನ್ ಪೂನಾವಾಲಾ ಪೊಲೀಸ್ ಕಸ್ಟಡಿ ಅವಧಿನ.22ರವರೆಗೂ ಮುಂದುವರಿಯಲಿದೆ.
ಪೊಲೀಸರು ಪೂನಾವಾಲಾನನ್ನು ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ, ‘ಆರೋಪಿ ಅಫ್ತಾಬ್, ಧಾರ್ಮಿಕ ಸಂಘಟನೆಗಳಿಂದ ಬೆದರಿಕೆ ಎದುರಿಸುತ್ತಿದ್ದಾನೆ. ಜತೆಗೆ, ಪೊಲೀಸರಿಂದ ಹೆಚ್ಚಿನ ವಿಚಾರಣೆ ಅಗತ್ಯವಿರುವ ಹಿನ್ನೆಲೆಯಲ್ಲಿ ಕಸ್ಟಡಿ ಅವಧಿಯನ್ನು ಮುಂದಿನ ಐದು ದಿನಗಳವರೆಗೆ ವಿಸ್ತರಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಕರಣದ ತನಿಖೆಯು ನಿರ್ಣಾಯಕ ಹಂತದಲ್ಲಿದ್ದು, ಆರೋಪಿಯ ಹೆಚ್ಚಿನ ವಿಚಾರಣೆ ಅಗತ್ಯವಿದೆ. ಆದ್ದರಿಂದ ಅಫ್ತಾಬ್ ಪೂನಾವಾಲಾನನ್ನು ಇನ್ನೂ ಸ್ವಲ್ಪ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ಗೆ ಪೊಲೀಸರು ಮನವಿ ಮಾಡಿದರು. ನ್ಯಾಯಾಲಯ ಇದನ್ನು ಮಾನ್ಯಮಾಡಿದೆ.
ನಾರ್ಕೋ ಪರೀಕ್ಷೆಗೆ ಅನುಮತಿ: ಆರೋಪಿ ಅಫ್ತಾಬ್ ಸಹಜೀವನದ ಸಂಗಾತಿ, ಭೀಕರ ಹತ್ಯೆಗೊಳಗಾದ ಶ್ರದ್ಧಾ ವಾಲಕರ್ ದೇಹದ ಉಳಿದ ಭಾಗಗಳಿಗೆ ಶೋಧ ಕಾರ್ಯ ಸತತ ಮೂರನೇ ದಿನವೂ ಛತ್ತರ್ಪುರದ ಅರಣ್ಯ ಪ್ರದೇಶದಲ್ಲಿ ಮುಂದುವರಿದಿದೆ. ಆರೋಪಿಯನ್ನು ಮಾದಕ ದ್ರವ್ಯ ಸೇವನೆ (ನಾರ್ಕೋ) ಪರೀಕ್ಷೆಗೆ ಒಳಪಡಿಸಲು ಪೊಲೀಸರು ಅನುಮತಿ ನೀಡುವಂತೆ ಕೋರ್ಟ್ಗೆ ಮನವಿ ಮಾಡಿದ್ದರು. ನ್ಯಾಯಾಲಯ ಇದಕ್ಕೆ ಒಪ್ಪಿಗೆ ಸೂಚಿಸಿದೆ.
ನಾರ್ಕೋ ಪರೀಕ್ಷೆಗೆ ಒಳಪಡುವುದಕ್ಕೆ ಅಫ್ತಾಬ್ ಒಪ್ಪಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಪ್ರೇಯಸಿ ಶ್ರದ್ಧಾಳ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿದ್ದ.
ಇವನ್ನೂ ಓದಿ
*ಅಫ್ತಾಬ್ ಅಮೀನ್ ಯಾರು? ಇದೊಂದು ಲವ್ ಜಿಹಾದ್ ಪ್ರಕರಣವೇ?
*ಶ್ರದ್ಧಾ ಕೊಲೆ ಪ್ರಕರಣ: ಗಾಯದ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಿದ್ದ ಅಫ್ತಾಬ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.