ADVERTISEMENT

ಅಪರಾಧಿಗಳನ್ನು ಕ್ಷಮಿಸಲಿ ಎಂದ ಇಂದಿರಾ ಜೈಸಿಂಗ್‌: ನಿರ್ಭಯಾ ತಾಯಿ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 18 ಜನವರಿ 2020, 6:44 IST
Last Updated 18 ಜನವರಿ 2020, 6:44 IST
ನಿರ್ಭಯಾ ತಾಯಿ ಆಶಾ ದೇವಿ
ನಿರ್ಭಯಾ ತಾಯಿ ಆಶಾ ದೇವಿ   

ನವದೆಹಲಿ:ರಾಜೀವ್‌ ಗಾಂಧಿ ಹತ್ಯೆ ಅಪರಾಧಿಗಳನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆ, ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಅವರ ತಾಯಿ ಕ್ಷಮಿಸಲಿ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಹೇಳಿರುವುದಕ್ಕೆ ನಿರ್ಭಯಾ ತಾಯಿ ಆಶಾ ದೇವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿರ್ಭಯಾ ಪ್ರಕರಣದ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿದ್ದ ಇಂದಿರಾ ಜೈಸಿಂಗ್‌ ’ನಿರ್ಭಯಾ ತಾಯಿ ಆಶಾ ದೇವಿ ಅವರ ನೋವನ್ನು ನಾನು ಸಂಪೂರ್ಣವಾಗಿ ಅರಿತಿದ್ದೇನೆ. ಆದರೆ, ರಾಜೀವ್‌ ಗಾಂಧಿ ಪ್ರಕರಣದಲ್ಲಿ ಅಪರಾಧಿಯಾಗಿರುವ ನಳಿನಿ ಅವರನ್ನು ಕ್ಷಮಿಸಿದ ಸೋನಿಯಾ ಗಾಂಧಿ ಅವರಂತೆ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಅವರ ತಾಯಿ ಆಶಾ ದೇವಿ ಕ್ಷಮಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ‘ ಎಂದು ಹೇಳಿದ್ದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಶಾ ದೇವಿ, ’‌ನನಗೆ ಸಲಹೆ ನೀಡಲು ಇಂದಿರಾ ಜೈಸಿಂಗ್‌ ಯಾರು? ಇಡೀ ದೇಶವೇ ನಿರ್ಭಯಾ ಪ್ರಕರಣದ ಅಪರಾಧಿಗಳು ನೇಣಿಗೆ ಏರಲಿ ಎಂದು ಬಯಸುತ್ತಿದೆ. ಇಂದಿರಾ ಜೈಸಿಂಗ್‌ರಂತಹ ಕೆಲ ಜನರಿಂದಲೇ ನ್ಯಾಯವು ವಿಳಂಬವಾಗುತ್ತಿದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಳೆದ ಕೆಲ ವರ್ಷಗಳಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರನ್ನು ಅನೇಕ ಬಾರಿ ಭೇಟಿ ಆಗಿದ್ದೇನೆ. ಆಗ ಅವರು ನನ್ನ ಸ್ಥಿತಿಗತಿಯ ಬಗ್ಗೆ ಒಂದು ಸಾರಿಯೂ ಕೇಳಲಿಲ್ಲ. ಈಗ ಮಾತ್ರ ಅಪರಾಧಿಗಳ ಪರ ಮಾತನಾಡುತ್ತಿದ್ದಾರೆ. ಅವರು ತಮ್ಮ ಹೊಟ್ಟೆಪಾಡಿಗಾಗಿ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದ್ದಾರೆ. ಇಂತವರಿಂದಲೇ ಅತ್ಯಾಚಾರಗಳು ಕಡಿಮೆ ಆಗುತ್ತಿಲ್ಲ‘ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.