ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ಪರಿಸರ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ ಅವರು ರಸ್ತೆ ಶುಚಿಗೊಳಿಸುವ ಯಂತ್ರದ ವಾಹನವನ್ನು ಸೋಮವಾರ ಪರಿಶೀಲಿಸಿದರು
– ಪಿಟಿಐ ಚಿತ್ರ
ನವದೆಹಲಿ: ದೆಹಲಿಯಲ್ಲಿ ರಸ್ತೆ ದೂಳು ಮಾಲಿನ್ಯ ನಿಯಂತ್ರಣ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಗೆ 10 ವರ್ಷಗಳ ಅವಧಿಯಲ್ಲಿ ₹2,388 ಕೋಟಿ ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಸಭೆಯಲ್ಲಿ ‘ಮಾಲಿನ್ಯ ನಿಯಂತ್ರಣ ಮತ್ತು ತುರ್ತು ಕ್ರಮಗಳು’ ಯೋಜನೆಗೆ ಅನುಮೋದನೆ ನೀಡಲಾಯಿತು.
ಈ ಯೋಜನೆ ಅಡಿಯಲ್ಲಿ ₹1,158 ಅಂದಾಜು ವೆಚ್ಚದಲ್ಲಿ ಹೊಗೆ ನಿರೋಧಕ ಗನ್ಗಳನ್ನು ಅಳವಡಿಸಲಾದ ನೀರು ಸಿಂಪಡಣಾ ಯಂತ್ರಗಳನ್ನು ಬಳಸಲಾಗುತ್ತದೆ. ಅಲ್ಲದೇ, ರಸ್ತೆ ಗುಡಿಸುವ 70 ಯಂತ್ರಗಳು (ಎಮ್ಆರ್ಎಸ್), 210 ನೀರು ಸಿಂಪಡಣಾ ಯಂತ್ರಗಳು, ನೀರಿನ ಟ್ಯಾಂಕರ್ಗಳು ಹಾಗೂ ಹೊಗೆ ನಿರೋಧಕ ಗನ್ಗಳನ್ನು 7 ವರ್ಷದ ಅವಧಿಗೆ ₹1,230 ಕೋಟಿಗೆ ಬಾಡಿಗೆಗೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಳೆಗಾಲ ಹೊರತುಪಡಿಸಿ, ವರ್ಷವಿಡೀ ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯು ಕಾರ್ಯಗತಗೊಳಿಸಲಿದೆ.
ದೆಹಲಿಯ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಈ ಯೋಜನೆ ಕೈಗೊಳ್ಳಲಾಗಿದೆ. ಈ ವಿಧಾನವು ಗಾಳಿಯಲ್ಲಿನ ಪಿಎಮ್–10ನ ಸಾಂದ್ರತೆಯನ್ನು ಕಡಿಮೆ ಮಾಡುವಲ್ಲಿ ಶೇ55ರಷ್ಟು ಪರಿಣಾಮಕಾರಿಯಾಗಿರಲಿದೆ ಎಂದು ವರದಿಯಾಗಿದೆ.
ರೇಖಾ ಗುಪ್ತಾ ಹಾಗೂ ಪರಿಸರ ಸಚಿವರಾದ ಮಂಜಿಂದರ್ ಸಿಂಗ್ ಸಿರ್ಸಾ ಯೋಜನೆಯನ್ನು ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.