
ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿರುವುದರಿಂದ ಏರ್ ಪ್ಯೂರಿಫೈರ್ಗಳ ಮೇಲಿನ ಜಿಎಸ್ಟಿಯನ್ನು ತಗ್ಗಿಸುವ ಅಥವಾ ತೆಗೆದುಹಾಕುವ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಜಿಎಸ್ಟಿ ಮಂಡಳಿಗೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರ ನೇತೃತ್ವದ ನ್ಯಾಯಪೀಠವು, ರಜಾಪೀಠದ ಎದುರು ಡಿಸೆಂಬರ್ 26ರಂದು ಅರ್ಜಿಯನ್ನು ವಿಚಾರಣೆಗೆ ಪಟ್ಟಿ ಮಾಡಿತು.
ಮಂಡಳಿಯು ಯಾವಾಗ ಸಭೆ ಸೇರಿ ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸುವಂತೆ ನ್ಯಾಯಪೀಠ ಹೇಳಿತು. ಇದೇ ವೇಳೆ ಎಲ್ಲರೂ ಒಂದೆಡೆ ಸೇರಲು ಸಾಧ್ಯವಾಗದಿದ್ದರೆ, ವಿಡಿಯೊ ಕಾನ್ಫರೆನ್ಸ್ ಮೂಲಕವಾದರೂ ಸಭೆ ಸೇರುವಂತೆ ಸಲಹೆ ನೀಡಿತು.
ಕೇಂದ್ರದ ಪರ ಹಾಜರಿದ್ದ ವಕೀಲರು, ‘ಜಿಎಸ್ಟಿ ಮಂಡಳಿಯು ಪ್ಯಾನ್ ಇಂಡಿಯಾ ಸಂಸ್ಥೆ. ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಮಂಡಳಿಯು ಸಭೆ ಕರೆಯಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ’ ಎಂದು ತಿಳಿಸಿದರು.
‘ಜಿಎಸ್ಟಿ ಮಂಡಳಿಯು ರೂಪುರೇಷೆ ಮತ್ತು ಸಂರಚನೆಯ ಬಗ್ಗೆ ನಮಗೆ ಅರಿವಿದೆ. ಆದರೆ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿರುವುದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಆದಷ್ಟು ಶೀಘ್ರವಾಗಿ ಮಂಡಳಿಯು ಸಭೆ ಸೇರುವ ಅಗತ್ಯವಿದೆ’ ಎಂದು ಹೇಳಿತು. ಬಳಿಕ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.
ಏರ್ ಪ್ಯೂರಿಫೈರ್ಗಳನ್ನು ‘ವೈದ್ಯಕೀಯ ಸಲಕರಣೆ’ಗಳೆಂದು ವರ್ಗೀಕರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಮತ್ತು ಜಿಎಸ್ಟಿಯನ್ನು ತಗ್ಗಿಸಬೇಕು ಎಂದು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಕೋರ್ಟ್ ವಿಚಾರಣೆ ನಡೆಸಿತು.
ಸದ್ಯ ಏರ್ ಪ್ಯೂರಿಫೈರ್ಗಳಿಗೆ ಶೇ 18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.
ಅಧಿಕಾರಿಗಳ ವಿರುದ್ಧ ಅಸಮಾಧಾನ
ಏರ್ ಪ್ಯೂರಿಫೈರ್ಗಳ ಮೇಲಿನ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. ಒಂದಿಷ್ಟು ಅವಧಿಯವರೆಗೆ ತಾತ್ಕಾಲಿಕವಾಗಿ ತೆರಿಗೆ ವಿನಾಯಿತಿ ನೀಡಬಹುದೇ ಎಂಬ ಬಗ್ಗೆ ಅಧಿಕಾರಿಗಳಿಂದ ಸಲಹೆ ಪಡೆಯಿರಿ ಎಂದು ಕೇಂದ್ರದ ಪರ ವಕೀಲರಿಗೆ ತಿಳಿಸಿತು.
‘ಪ್ರತಿಯೊಬ್ಬರ ನಾಗರಿಕರಿಗೂ ಶುದ್ಧ ಗಾಳಿ ಬೇಕು. ಅಧಿಕಾರಿಗಳಿಂದ ಅದನ್ನು ನೀಡಲು ಸಾಧ್ಯವಿಲ್ಲ. ಕನಿಷ್ಠ ಏರ್ ಪ್ಯೂರಿಫೈರ್ಗಳನ್ನಾದರೂ ನೀಡಿ’ ಎಂದು ತರಾಟೆಗೆ ತೆಗೆದುಕೊಂಡಿತು. ಅರ್ಜಿದಾರರ ಪರ ವಕೀಲ ಕಪಿಲ್ ಮದನ್ ಅವರು ‘ವಾಯು ಮಾಲಿನ್ಯದಿಂದ ಉಂಟಾದ ತುರ್ತು ಬಿಕ್ಕಟ್ಟಿನ ಸಂದರ್ಭದಲ್ಲೂ ಏರ್ ಪ್ಯೂರಿಫೈರ್ಗಳನ್ನು ಐಷಾರಾಮಿ ವಸ್ತುಗಳಂತೆ ಪರಿಗಣಿಸುವುದು ಸರಿಯಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.