ನವದೆಹಲಿ: ಖಲಿಸ್ತಾನ ಚಳವಳಿಯಂತಹ ಭಾರತ ವಿರೋಧಿ ಪ್ರಚಾರದ ಪಿತೂರಿಯಲ್ಲಿ ಭಾಗಿಯಾಗಿದ್ದಾಗಿ ಸಾಮಾಜಿಕ ಮಾಧ್ಯಮಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ಈ ವಿಷಯವನ್ನು ನ್ಯಾಯಾಲಯದ ಎದುರು ತರುವುದಕ್ಕೆ ಮುನ್ನ ಕೇಂದ್ರ ಸರ್ಕಾರಕ್ಕೆ ತಿಳಿಸುವಂತೆ ನ್ಯಾಯಾಲಯ ಸೂಚಿಸಿದೆ.
ಮುಖ್ಯನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಪ್ರತೀಕ್ ಜಲಾನ್ ಅವರನ್ನೊಳಗೊಂಡ ಪೀಠ ‘ಈ ಅರ್ಜಿಯಲ್ಲಿರುವ ಯಾವ ಅಂಶವನ್ನೂ ಸರ್ಕಾರಕ್ಕೆ ತಿಳಿಸಿಲ್ಲ. ಸಂಸದರ ಹೇಳಿಕೆ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಲಾಗಿದೆ‘ ಎಂದು ಹೇಳಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರ ವಾದವನ್ನು ಆಲಿಸಿದ ಪೀಠ, ‘ಅರ್ಜಿದಾರರು ಇಂಥ ವಿಷಯವನ್ನು ನ್ಯಾಯಾಲಯದ ಎದುರು ತರುವ ಮುನ್ನ ಕಾರ್ಯಾಂಗವನ್ನು ಸಂಪರ್ಕಿಸಬೇಕು‘ ಎಂದು ತಿಳಿಸಿದೆ.
ಅರ್ಜಿದಾರರಾದ ಸಂಗೀತಾ ಶರ್ಮಾ ಅವರಿಗೆ, ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು, ಕೇಂದ್ರ ಸರ್ಕಾರದ ಎದುರು ಸೂಕ್ತ ಮಾಹಿತಿಯನ್ನು ಸಲ್ಲಿಸಲು ಪೀಠ ಅವಕಾಶ ನೀಡಿದೆ.
ವಕೀಲರಾದ ದೇಶ್ ರತನ್ ನಿಗಮ್ ಮತ್ತು ಅವನಿಶ್ ಸಿನ್ಹಾ ಅವರ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಟ್ವಿಟರ್ ಮತ್ತು ಭಾರತದಲ್ಲಿನ ಅದರ ಪ್ರತಿನಿಧಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, ದೇಶದ್ರೋಹ ಮತ್ತು ದೇಶದ ವಿರುದ್ಧ ಯುದ್ಧ ನಡೆಸುವ ಐಪಿಸಿಯ ನಿಬಂಧನೆಗಳು ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಕೇಳಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.