ಮುಂಬೈ: ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಂಡಿರುವ ಪರಮ್ ಬೀರ್ ಸಿಂಗ್ ಅವರನ್ನು ಸಮರ್ಥಿಸಿಕೊಂಡ ಶಿವಸೇನಾ, ‘ವರ್ಗಾವಣೆಯಾದ ಮಾತ್ರಕ್ಕೆ ಅವರು ಅಪರಾಧಿಯಾಗುವುದಿಲ್ಲ‘ ಎಂದು ಹೇಳಿದೆ.
ಟಿಆರ್ಪಿ ಹಗರಣ ಅವರ ಆಡಳಿತಾವಧಿಯಲ್ಲೇ ಬೆಳಕಿಗೆ ಬಂದಿದ್ದರಿಂದ ದೆಹಲಿಯಲ್ಲಿನ ಅಧಿಕಾರ ವರ್ಗಕ್ಕೆ ಇರಿಸು ಮುರಿಸು ಆಗಿತ್ತು ಎಂದು ಆರೋಪ ಮಾಡಿದೆ.
ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಪೋಟಕಗಳು ತುಂಬಿದ್ದ ಎಸ್ಯುವಿ ಪತ್ತೆಯಾದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೈಗೊಂಡ ಕ್ರಮವನ್ನು ಪ್ರಶ್ನಿಸಿರುವ ಆಡಳಿತ ಪಕ್ಷ ಶಿವಸೇನಾ, ಈ ಸಂಸ್ಥೆ ಸಾಮಾನ್ಯವಾಗಿ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳನ್ನು ತನಿಖೆ ಮಾಡುತ್ತದೆ. ಈ ಪ್ರಕರಣದಲ್ಲಿ ಯಾವುದೇ ಭಯೋತ್ಪಾದಕತೆಯ ದೃಷ್ಟಿಕೋನ ಇರಲಿಲ್ಲ‘ ಎಂದು ಹೇಳಿದೆ.
ಈ ಪ್ರಕರಣದ ನಿರ್ವಹಣೆಗೆ ಸಂಬಂಧಿಸಿದಂತೆ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸ್ ಆಯುಕ್ತರ ಹುದ್ದೆಯಿಂದ ಬುಧವಾರ ವರ್ಗಾವಣೆ ಮಾಡಿತ್ತು. ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಗರಾಳೆ ಅವರನ್ನು ನೇಮಕ ಮಾಡಿತ್ತು.
ಶಿವಸೇನಾ, ತಮ್ಮ ಪಕ್ಷದ ಮುಖವಾಣಿ ‘ಸಾಮ್ನಾ‘ದಲ್ಲಿ ಈ ಪ್ರಕರಣದ ನಂತರ ನಡೆದ ರಾಜಕೀಯ ಬೆಳವಣಿಗಳು ಮತ್ತು ಪೊಲೀಸ್ ಆಯುಕ್ತರ ವರ್ಗಾವಣೆಯನ್ನು ಉಲ್ಲೇಖಿಸಿ, ಇದು ವಾಡಿಕೆಯ ವರ್ಗಾವಣೆಯಲ್ಲ ಎಂದು ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.