ಬಿಜೆಪಿ
ರಾಂಚಿ: ಬಿಜೆಪಿಗೆ ಸೇರದಿದ್ದರೆ ತಮ್ಮನ್ನೂ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಲಿದೆ ಎಂದು ದೆಹಲಿ ಸಚಿವೆ, ಎಎಪಿ ನಾಯಕಿ ಅತಿಶಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಜಾರ್ಖಂಡ್ ಬಿಜೆಪಿ, ಇದೊಂದು ರಾಜಕೀಯ ತಂತ್ರ ಎಂದು ವಾಗ್ದಾಳಿ ನಡೆಸಿದೆ.
‘ಪಕ್ಷಕ್ಕೆ ಸೇರುವಂತೆ ನನ್ನ ಆಪ್ತ ವ್ಯಕ್ತಿಯೊಬ್ಬರ ಮೂಲಕ ಬಿಜೆಪಿ ನನ್ನನ್ನು ಸಂಪರ್ಕಿಸಿದೆ. ಪಕ್ಷಕ್ಕೆ ಸೇರ್ಪಡೆಗೊಳ್ಳದಿದ್ದರೆ ಒಂದು ತಿಂಗಳೊಳಗೆ ಇ.ಡಿಯಿಂದ ಬಂಧನಕ್ಕೊಳಗಾಗಲು ಸಿದ್ಧರಾಗಿ ಎಂದು ಹೇಳಿದೆ’ ಎಂದು ದೆಹಲಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಅತಿಶಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಾರ್ಖಂಡ್ ಬಿಜೆಪಿಯ ರಾಜ್ಯಸಭಾ ಸಂಸದ ಆದಿತ್ಯ ಸಾಹು, ‘ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜನರು ಕಷ್ಟಪಟ್ಟು ದುಡಿದ ಹಣವನ್ನು ಎಎಪಿ ನಾಯಕರು ಲೂಟಿ ಮಾಡಿದ್ದಾರೆ. ಈಗ ಮೊಸಳೆ ಕಣ್ಣೀರು ಸುರಿಸುತ್ತ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಮ್ಮ ನಿವಾಸ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಲಿದೆ. ಬಳಿಕ ಸಮನ್ಸ್ ನೀಡಲಿದೆ. ನನ್ನನ್ನೂ ಸೇರಿದಂತೆ ದೆಹಲಿ ಸಚಿವ ಸೌರಭ್ ಭಾರದ್ವಾಜ್, ಶಾಸಕ ದುರ್ಗೇಶ್ ಪಾಠಕ್ ಮತ್ತು ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರನ್ನು ಇ.ಡಿ ಬಂಧಿಸಲಿದೆ ಎಂದು ಅತಿಶಿ ಆರೋಪಿಸಿದ್ದಾರೆ.
‘ಆರೋಪಿ ವಿಜಯ್ ನಾಯರ್ ನಿರ್ದೇಶನದಂತೆ ಅತಿಶಿ ಕೆಲಸ ಮಾಡುತ್ತಿದ್ದರು ಎಂಬುದಾಗಿ ಕೇಜ್ರಿವಾಲ್ ಹೇಳಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಆಕೆ (ಅತಿಶಿ) ಸಿಕ್ಕಿಬಿದ್ದಿದ್ದಾಳೆ’ ಎಂದು ಜಾರ್ಖಂಡ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಮರ್ ಬೌರಿ ಆರೋಪಿಸಿದ್ದಾರೆ.
‘ಇದು ಜನರನ್ನು ದಾರಿತಪ್ಪಿಸುವ ರಾಜಕೀಯ ತಂತ್ರವಾಗಿದೆ. ಭ್ರಷ್ಟಾಚಾರ ವಿರುದ್ಧದ ಆಂದೋಲನದಿಂದ ಹೊರಹೊಮ್ಮಿದ್ದ ಆಮ್ ಆದ್ಮಿ ಪಕ್ಷ, ಈಗ ಭ್ರಷ್ಟಾಚಾರದಲ್ಲಿ ತೊಡಗಿರುವುದು ಅತ್ಯಂತ ದುರದೃಷ್ಟಕರ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.