ADVERTISEMENT

ಶ್ರದ್ಧಾ ಕೊಲೆ ಪ್ರಕರಣ: ಗಾಯದ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಿದ್ದ ಅಫ್ತಾಬ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 11:30 IST
Last Updated 26 ನವೆಂಬರ್ 2022, 11:30 IST
   

ನವದೆಹಲಿ: ದೇಶವನ್ನೇ ಬೆಚ್ಚಿಬೀಳಿಸಿದ ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್‌ ಪೂನಾವಾಲ ತನಿಖೆಯಿಂದ ಒಂದೊಂದೇ ಕ್ರೂರ ಸತ್ಯ ಹೊರಬರುತ್ತಿದೆ. ಶ್ರದ್ಧಾ ಕೊಲೆ ಮಾಡಿದ ಬಳಿಕ ಅಫ್ತಾಬ್‌ ಕೈಯ್ಯಲ್ಲಿ ಸಣ್ಣ ಗಾಯಗಳಾಗಿದ್ದು ಸ್ಥಳೀಯ ವೈದ್ಯರೊಬ್ಬರ ಬಳಿ ಚಿಕಿತ್ಸೆ ಪಡೆದಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ.

28 ವರ್ಷದ ಅಫ್ತಾಬ್‌ ತನ್ನ ಪ್ರೇಯಸಿ ಶ್ರದ್ಧಾಳನ್ನು(27) ಕೊಲೆ ಮಾಡಿ ದೇಹವನ್ನು 35 ತುಂಡಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಟ್ಟು, ಬಳಿಕ ಮೆಹ್ರೌಲಿ ಕಾಡಿನ ವಿವಿಧೆಡೆ ಹೂತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಈ ಸಂಬಂಧ ದೆಹಲಿ ಪೊಲೀಸರು ಮಂಗಳವಾರ ಆರೋಪಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ದೇಹದ ಭಾಗಗಳಿಗಾಗಿ ಹುಡುಕಾಟ ನಡೆಸಿದ್ದರು.

ದೆಹಲಿ ಪೊಲೀಸರು ಅಫ್ತಾಬ್‌ನನ್ನು ಬಂಧಿಸುತ್ತಿದ್ದಂತೆ ಆತ ಕೆಲಸ ಮಾಡುತ್ತಿದ್ದ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ. ಕಳೆದ 3 ತಿಂಗಳಿನಿಂದ ಆತ ಗುರುಗ್ರಾಮದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕೊಲೆಯ ಮರುದಿನದಿಂದ ಆತ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.