ADVERTISEMENT

ಆಟೊ ಡ್ರೈವರ್‌ಗಳಿಗೆ ₹10 ಲಕ್ಷ ವಿಮೆ, ಮಗಳ ಮದುವೆಗೆ ₹1 ಲಕ್ಷ: ಕೇಜ್ರಿವಾಲ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 10:29 IST
Last Updated 10 ಡಿಸೆಂಬರ್ 2024, 10:29 IST
<div class="paragraphs"><p>ದೆಹಲಿಯ ಹೊಸ ಕೊಂಡ್ಲಿಯಲ್ಲಿ ಆಟೊ ರಿಕ್ಷಾ ಚಾಲಕರೊಬ್ಬರ ನಿವಾಸದಲ್ಲಿ&nbsp;ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಪತ್ನಿ ಸುನೀತಾ ಅವರು ಭೋಜನ ಸವಿದರು</p></div>

ದೆಹಲಿಯ ಹೊಸ ಕೊಂಡ್ಲಿಯಲ್ಲಿ ಆಟೊ ರಿಕ್ಷಾ ಚಾಲಕರೊಬ್ಬರ ನಿವಾಸದಲ್ಲಿ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಹಾಗೂ ಅವರ ಪತ್ನಿ ಸುನೀತಾ ಅವರು ಭೋಜನ ಸವಿದರು

   

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ(ಎಎಪಿ) ವರಿಷ್ಠ ಅರವಿಂದ ಕೇಜ್ರಿವಾಲ್ ಅವರು, ರಾಜಧಾನಿಯ ಆಟೊ ಡ್ರೈವರ್‌ಗಳಿಗೆ ₹10 ಲಕ್ಷದ ವಿಮೆ ನೀಡುವ ಭರವಸೆ ನೀಡಿದ್ದಾರೆ.

ಕೊಂಡ್ಲಿ ವಿಧಾನಸಭಾ ಕ್ಷೇತ್ರದ ಆಟೋ ಚಾಲಕನ ಕುಟುಂಬ ಸದಸ್ಯರ ಜೊತೆ ಮಧ್ಯಾಹ್ನದ ಊಟ ಸವಿದ ಕೇಜ್ರಿವಾಲ್, ಆಟೊ ಚಾಲಕರ ಹೆಣ್ಣುಮಕ್ಕಳ ಮದುವೆಗೆ ₹1 ಲಕ್ಷ ಸಹಾಯಧನದ ಭರವಸೆಯನ್ನೂ ನೀಡಿದ್ದಾರೆ.

ADVERTISEMENT

ಅಲ್ಲದೆ, ಆಟೋ ಚಾಲಕರಿಗೆ ವರ್ಷಕ್ಕೆ ಎರಡು ಬಾರಿ ತಲಾ ₹2,500ನಂತೆ ಸಮವಸ್ತ್ರ ಭತ್ಯೆ , 'PoochO'ಆ್ಯಪ್ ರೀಲಾಂಚ್ ಮತ್ತು ಆಟೊ ಚಾಲಕರ ಮಕ್ಕಳಿಗೆ ಉಚಿತ ಕೋಚಿಂಗ್ ನೀಡುವ ಆಶ್ವಾಸನೆ ನೀಡಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಮುಂದಿನ ವರ್ಷದ ಫೆಬ್ರುವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಸವಾಲುಗಳನ್ನು ಎದುರಿಸಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಲು ಎಎಪಿ ಶತಪ್ರಯತ್ನ ಮಾಡುತ್ತಿದೆ.

2020ರ ಚುನಾವಣೆಯಲ್ಲಿ ಎಎಪಿ ಪಕ್ಷ 62 ಕ್ಷೇತ್ರಗಳಲ್ಲಿ ಗೆದ್ದು ಪ್ರಚಂಡ ಬಹುಮತ ಪಡೆದಿತ್ತು. ಬಿಜೆಪಿ 8 ಕ್ಷೇತ್ರಗಳಿಗೆ ತೃಪ್ತಿಪಟ್ಟುಕೊಂಡಿತ್ತು.

ಎಎಪಿಯ 10 ಶಾಸಕರ ಮೇಲೆ ಬಿಜೆಪಿ ಆರೋಪಪಟ್ಟಿ

ಸರಿಯಾಗಿ ಕಾರ್ಯನಿರ್ವಹಣೆ ಮಾಡದೆ ತಮ್ಮ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂದು ಎಎಪಿಯ 10 ಶಾಸಕರ ಮೇಲೆ ಬಿಜೆಪಿ ಆರೋಪ ಹೊರಿಸಿದೆ. ಎಎಪಿಯು 20 ಅಭ್ಯರ್ಥಿಗಳ ತನ್ನ ಎರಡನೇ ಪಟ್ಟಿಯಲ್ಲಿ 18 ಹಾಲಿ ಶಾಸಕರನ್ನು ಕೈಬಿಟ್ಟಿದೆ ಎಂದು ಬಿಜೆಪಿಯ ಆರೋಪಪಟ್ಟಿ ಸಮಿತಿಯ ನೇತೃತ್ವ ವಹಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜೇಂದರ್‌ ಗುಪ್ತ ತಿಳಿಸಿದ್ದಾರೆ. ಇತರೆ ಇಬ್ಬರು ಶಾಸಕರಾದ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಹಾಗೂ ವಿಧಾನಸಭೆಯ ಉಪ ಸಭಾಪತಿ ರಾಖಿ ಬಿರ್ಲಾ ತಮ್ಮ ಕ್ಷೇತ್ರವನ್ನು ಬಿಟ್ಟು ‘ಸುರಕ್ಷತಾ ಆಯ್ಕೆ’ಗಳನ್ನು ಆರಿಸಿಕೊಂಡಿದ್ದಾರೆ ಎಂದರು. ‘ಎಎಪಿ ಸರ್ಕಾರದ ವೈಫಲ್ಯಗಳು ಮತ್ತು ದುಷ್ಕೃತ್ಯಗಳ ಕುರಿತ ಆರೋಪಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ. ಈ ಪಟ್ಟಿಗಳನ್ನು ಅವರವರ ಕ್ಷೇತ್ರಗಳಲ್ಲಿ ಜನರಿಗೆ ಹಂಚಲಾಗುತ್ತದೆ’ ಎಂದು ಹೇಳಿದರು.

ಬಿಜೆಪಿಯೊಂದಿಗೆ ಚುನಾವಣಾ ಆಯೋಗ ಹೊಂದಾಣಿಕೆ: ಸಂಜಯ್‌ ಸಿಂಗ್‌ ಆರೋಪ ಚುನಾವಣಾ ಆಯೋಗವು ‘ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ’ ಎಂದು ಎಎಪಿಯ ಹಿರಿಯ ನಾಯಕ ಸಂಜಯ್‌ ಸಿಂಗ್‌ ಆರೋಪಿಸಿದ್ದಾರೆ. ಎಎಪಿ ಗೆಲುವಿಗೆ ಸಹಾಯವಾಗುತ್ತಿರುವ ಬೂತ್‌ಗಳಲ್ಲೇ ಸುಮಾರು 3800 ಮತದಾರರ ಹೆಸರುಗಳನ್ನು ಅಳಿಸಿ ಹಾಕಲು ಅರ್ಜಿ ಸಲ್ಲಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮುಂಬರುವ ಚುನಾವಣಾ ಹೊತ್ತಿನಲ್ಲೇ ಮತದಾರರ ಪಟ್ಟಿಯಿಂದ ಹಲವು ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಮತ್ತು ಪಕ್ಷದ ಇತರ ನಾಯಕರು ಸಹ ಆರೋಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.