ನವದೆಹಲಿ: ದೆಹಲಿಯಲ್ಲಿ ಕಳಪೆಯಾಗುತ್ತಿರುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ಕ್ರಮವಾಗಿ ಗಾಳಿಯಲ್ಲಿರುವ ದೂಳಿನ ಕಣಗಳ ಪ್ರಮಾಣವನ್ನು ತಗ್ಗಿಸಲು ಅಗ್ನಿಶಾಮಕ ಸಿಬ್ಬಂದಿ 3 ಪ್ರಮುಖ ಮಾಲಿನ್ಯ ಉತ್ಪಾದಿಸುವ ತಾಣಗಳಲ್ಲಿ, ಕಳೆದ 36 ದಿನಗಳಲ್ಲಿ 70 ಲಕ್ಷ ಲೀಟರ್ನಷ್ಟು ನೀರನ್ನು ಸಿಂಚನ ಮಾಡಿದ್ದಾರೆ!
ಗಾಳಿಯಲ್ಲಿರುವ ದೂಳಿನ ಪ್ರಮಣವನ್ನು ಪರೀಕ್ಷಿಸಿದ ನಂತರ ದೆಹಲಿ ಸರ್ಕಾರದ ಆದೇಶದ ಮೇರೆಗೆ ಅಕ್ಟೋಬರ್ 17ರಿಂದ ನೀರು ಸಿಂಚನ ಕಾರ್ಯ ಆರಂಭವಾಗಿದೆ.
ಅಗ್ನಿಶಾಮಕ ಇಲಾಖೆಯ ಪ್ರಕಾರ, ದೆಹಲಿ ಸರ್ಕಾರ ಮಾಲಿನ್ಯ ತಾಣಗಳಾಗಿ ಘೋಷಿಸಿದ 13 ಸ್ಥಳಗಳಲ್ಲಿ ಪ್ರತಿದಿನ ಸುಮಾರು ಎರಡು ಲಕ್ಷ ಲೀಟರ್ ನೀರನ್ನು ಸಿಬ್ಬಂದಿ ಸಿಂಪಡಿಸುತ್ತಿದ್ದಾರೆ. ಜಹಾಂಗೀರ್ಪುರಿ, ನರೇಲ, ಅಶೋಕ್ ವಿಹಾರ್, ವಿವೇಕ್ ವಿಹಾರ್, ದ್ವಾರಕಾ, ಮುಂಡ್ಕಾ, ರೋಹಿಣಿ, ವಾಜೀರ್ಪುರ, ಓಖ್ಲಾ, ಬವಾನ, ಆನಂದ್ ವಿಹಾರ್, ಪಂಜಾಬಿ ಬಾಗ್ ಮತ್ತು ಆರ್.ಕೆ.ಪುರಂ – ಇವು ನೀರು ಸಿಂಚನ ಮಾಡುತ್ತಿರುವ ಪ್ರಮುಖ ತಾಣಗಳು.
ಗುರುತಿಸಿರುವ ಮಾಲಿನ್ಯ ಉತ್ಪಾದಕ ತಾಣಗಳಲ್ಲಿ ನೀರು ಸಿಂಪಡಿಸಲು 15 ಅಗ್ನಿಶಾಮಕ ವಾಹನಗಳನ್ನು ಬಳಸಲಾಗುತ್ತಿದೆ. ಸುಮಾರು 45 ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗರ್ಗ್ ತಿಳಿಸಿದ್ದಾರೆ.
‘ಪ್ರತಿದಿನ ಬೆಳಿಗ್ಗೆ ಎರಡು ಗಂಟೆ ಮತ್ತು ಸಂಜೆ ಎರಡು ಗಂಟೆಗಳ ಕಾಲ ಈ ಕೆಲಸ ನಡೆಯುತ್ತದೆ‘ ಎಂದು ಗಾರ್ಗ್ ಪ್ರತಿಕ್ರಿಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.