ADVERTISEMENT

ಕೊರೊನಾ ವೈರಸ್‌ ತಳಿ ವಿಶ್ಲೇಷಣೆಗೆ ಪ್ರಯೋಗಾಲಯ ಸ್ಥಾಪನೆ - ಕೇಜ್ರಿವಾಲ್‌

ಸಂಭಾವ್ಯ ಮೂರನೇ ಅಲೆ ಎದುರಿಸಲು ಹಲವು ಕ್ರಮ ಘೋಷಿಸಿದ ಕೇಜ್ರಿವಾಲ್‌

ಪಿಟಿಐ
Published 5 ಜೂನ್ 2021, 11:01 IST
Last Updated 5 ಜೂನ್ 2021, 11:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್‌–19ನ ಸಂಭಾವ್ಯ ಮೂರನೇ ಅಲೆಯನ್ನು ಎದುರಿಸುವ ಸಲುವಾಗಿ ದೆಹಲಿಯಲ್ಲಿ ಮಕ್ಕಳ ವೈದ್ಯಕೀಯ ಕಾರ್ಯಪಡೆ (ಪಿಡಿಯಾಟ್ರಿಕ್ ಟಾಸ್ಕ್‌ ಫೋರ್ಸ್‌) ಸ್ಥಾಪನೆ ಸೇರಿದಂತೆ ಹಲವಾರು ಕ್ರಮಗಳನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶನಿವಾರ ಘೋಷಿಸಿದ್ದಾರೆ.

ಕೊರೊನಾ ವೈರಸ್‌ ತಳಿಗಳ ವಿಶ್ಲೇಷಣೆಗಾಗಿ ಎರಡು ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು ಹಾಗೂ ನಿರಂತರ ಆಮ್ಲಜನಕ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವರ್ಚುವಲ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಸಂಭಾವ್ಯ ಮೂರನೇ ಅಲೆಯಲ್ಲಿ ದಿನದಲ್ಲಿ ಗರಿಷ್ಠ 37,000 ಕೋವಿಡ್‌ ಪ್ರಕರಣಗಳು ವರದಿಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.

ADVERTISEMENT

‘ಮೂರನೇ ಅಲೆ ಸಂದರ್ಭದಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳನ್ನು ಸಂಗ್ರಹಿಸಲಾಗುವುದು. ಲೋಕನಾಯಕ ಜಯಪ್ರಕಾಶ್‌ ಆಸ್ಪತ್ರೆ ಹಾಗೂ ಇನ್ಸ್‌ಟಿಟ್ಯೂಟ್‌ ಆಫ್‌ ಲಿವರ್‌ ಆ್ಯಂಡ್‌ ಬೈಲರಿ ಸೈನ್ಸಸ್‌ (ಐಎಲ್‌ಬಿಎಸ್‌)ನಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು’ ಎಂದು ತಿಳಿಸಿದರು.

‘ನಗರದ ಜನತೆಯನ್ನು ಬಾಧಿಸಬಹುದಾದ ಕೊರೊನಾ ವೈರಸ್‌ನ ತಳಿಗಳನ್ನು ಪತ್ತೆ ಹಚ್ಚಲು ಈ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುತ್ತಿದೆ’ ಎಂದರು.

‘ಎರಡನೇ ಅಲೆ ಸಂದರ್ಭದಲ್ಲಿ ಒಂದು ದಿನದಲ್ಲಿ ಗರಿಷ್ಠ 28,000 ಪ್ರಕರಣಗಳು ವರದಿಯಾಗಿದ್ದವು. ಮೂರನೇ ಅಲೆಯಲ್ಲಿ ಪ್ರಕರಣಗಳ ಗರಿಷ್ಠ ಸಂಖ್ಯೆ 37,000 ತಲುಪಬಹುದು ಎನ್ನಲಾಗುತ್ತಿದೆ. ಇಷ್ಟೊಂದು ಸಂಖ್ಯೆಯ ಪ್ರಕರಣಗಳು ವರದಿಯಾದರೂ, ಎದುರಿಸಲು ಸರ್ಕಾರ ಸಿದ್ಧವಾಗಿರಲಿದೆ’ ಎಂದು ಹೇಳಿದರು.

ಸಂಭಾವ್ಯ ಮೂರನೇ ಅಲೆ ಎದುರಿಸುವ ಸಲುವಾಗಿ ಯೋಜನೆ ರೂಪಿಸಲು ಕೇಜ್ರಿವಾಲ್‌ ಅವರು ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಶುಕ್ರವಾರ ಆರು ಗಂಟೆಗಳ ಕಾಲ ಸಭೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.