ADVERTISEMENT

ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಯೋಗಿಶ್‌ ತ್ಯಾಗಿ ಅಮಾನತು

ಪಿಟಿಐ
Published 28 ಅಕ್ಟೋಬರ್ 2020, 13:47 IST
Last Updated 28 ಅಕ್ಟೋಬರ್ 2020, 13:47 IST
ರಾಮನಾಥ ಕೋವಿಂದ್‌
ರಾಮನಾಥ ಕೋವಿಂದ್‌   

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಆದೇಶದ ಮೇಲೆ ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಯೋಗಿಶ್‌ ತ್ಯಾಗಿ ಅವರನ್ನು ಬುಧವಾರ ಅಮಾನತುಗೊಳಿಸಲಾಗಿದೆ. ಜೊತೆಗೆ ಕರ್ತವ್ಯಲೋಪದ ಆರೋಪದ ಕುರಿತಂತೆ ತನಿಖೆಗೆ ರಾಷ್ಟ್ರಪತಿ ನಿರ್ದೇಶಿಸಿದ್ದಾರೆ ಎಂದು ಕೇಂದ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಅಧಿಕಾರದ ವಿಷಯವಾಗಿ ಒಳಜಗಳ ನಡೆಯುತ್ತಿರುವ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ತನಿಖೆ ನಿರ್ದೇಶಿಸುವ ಅಧಿಕಾರವುಳ್ಳ ರಾಷ್ಟ್ರಪತಿ ಅವರು ತ್ಯಾಗಿ ಅವರನ್ನು ಅಮಾನತಿನಲ್ಲಿ ಇರಿಸಿದ್ದಾರೆ. ತನಿಖೆಯು ಪಾರದರ್ಶಕವಾಗಿರಬೇಕು ಹಾಗೂ ಸಾಕ್ಷಿದಾರರ ಮೇಲೆ ಪ್ರಭಾವ ಬೀರಬಾರದು ಮತ್ತು ದಾಖಲೆಗಳನ್ನು ನಾಶಪಡಿಸಬಾರದು ಎನ್ನುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅನಾರೋಗ್ಯದ ಕಾರಣ ಜು.2ರಿಂದ ತ್ಯಾಗಿ ಅವರು ರಜೆಯಲ್ಲಿದ್ದು, ಪಿ.ಸಿ.ಜೋಶಿ ಅವರಿಗೆ ಜು.17ರಂದು ತಾತ್ಕಾಲಿಕವಾಗಿ ಕುಲಪತಿಯ ಕರ್ತವ್ಯ ನೀಡಲಾಗಿತ್ತು. ಕಳೆದ ಗುರುವಾರ ಜೋಶಿ ಅವರನ್ನು ಕುಲಪತಿ ಕರ್ತವ್ಯದಿಂದ ತೆಗೆದು, ಗೀತಾ ಭಟ್‌ ಅವರನ್ನು ತ್ಯಾಗಿ ನಿಯೋಜಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

‘ಕುಲಪತಿಯ ಕರ್ತವ್ಯಲೋಪದಿಂದ ವಿಶ್ವವಿದ್ಯಾಲಯದ ಆಡಳಿತವು ಹಳಿತಪ್ಪಿದ್ದು, ಶೈಕ್ಷಣಿಕ ಕಾರ್ಯಕ್ರಮಗಳಿಗೂ ಅಡ್ಡಿಯಾಗುತ್ತಿದೆ. ಹೀಗಾಗಿ ತ್ಯಾಗಿ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.