ADVERTISEMENT

ದೆಹಲಿ ಹಿಂಸಾಚಾರ | 1984ರ ಸಿಖ್ ವಿರೋಧಿ ದಂಗೆಯ ಘೋರ ಚಿತ್ರಣ: ಶಿವಸೇನಾ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 9:03 IST
Last Updated 26 ಫೆಬ್ರುವರಿ 2020, 9:03 IST
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ
ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ   

ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರವು 1984ರ ಸಿಖ್ ವಿರೋಧಿ ದಂಗೆಯ ಕಠೋರ ವಾಸ್ತವವನ್ನು ಚಿತ್ರಿಸುವ ಭಯಾನಕ ಚಿತ್ರಣವಾಗಿದೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರೀತಿಯ ಸಂದೇಶದೊಂದಿಗೆ ಭಾರತದಲ್ಲಿರುವಾಗ ದೆಹಲಿಯಲ್ಲಿನ ರಕ್ತದೋಕುಳಿಯು ಹಿಂದೆಂದಿಗಿಂತಲೂ ತೀವ್ರ ಅಪಖ್ಯಾತಿಗೆ ಒಳಗಾಗಿದೆ ಎಂದು ಶಿವಸೇನಾ ಆರೋಪಿಸಿದೆ.

ಈ ಕುರಿತು ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ,ಒಂದು ಕಡೆ ದೆಹಲಿಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸುತ್ತಿದ್ದರೆ, ರಸ್ತೆಗಳಲ್ಲಿ ರಕ್ತದೋಕುಳಿಯಾಗುತ್ತಿತ್ತು. ಹೆಚ್ಚುತ್ತಲೇ ಇರುವ ಹಿಂಸಾಚಾರವು ಕೇಂದ್ರ ಸರ್ಕಾರವು ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ದೂರಿದೆ.

ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಜನರುಕತ್ತಿಗಳು ಮತ್ತು ರಿವಾಲ್ವರ್‌ಗಳನ್ನು ಹಿಡಿದು ಬೀದಿಗಿಳಿದಿದ್ದಾರೆ, ರಸ್ತೆಗಳಲ್ಲಿ ರಕ್ತವುಚೆಲ್ಲಿದೆ. ದೆಹಲಿಯಲ್ಲಿನ ಪರಿಸ್ಥಿತಿಯು 1984ರ ಸಿಖ್ ವಿರೋಧಿ ಗಲಭೆಯ ಕಠೋರ ವಾಸ್ತವಗಳನ್ನು ಚಿತ್ರಿಸುತ್ತಿದೆ. ಇಂದಿರಾ ಗಾಂಧಿಯವರ ಹತ್ಯೆಯ ನಂತರದ ಹಿಂಸಾಚಾರದಲ್ಲಿ ನೂರಾರು ಸಿಖ್ಖರು ಬಲಿಯಾಗಿದ್ದಕ್ಕಾಗಿ ಕಾಂಗ್ರೆಸ್‌ ಅನ್ನು ಇಂದಿಗೂ ಬಿಜೆಪಿ ದೂರುತ್ತಲೇ ಇದೆ. ಆದರೆ ದೆಹಲಿಯ ಹಿಂಸಾಚಾರಕ್ಕೆ ಕಾರಣ ಯಾರು ಎಂಬುದನ್ನು ತಿಳಿಸಬೇಕಿದೆ ಎಂದು ಒತ್ತಾಯಿಸಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರು ಮಾತುಕತೆ ನಡೆಸುತ್ತಿದ್ದರೆ ಇತ್ತ ದೆಹಲಿಯು ಹೊತ್ತಿ ಉರಿಯುತ್ತದೆ. ಹಿಂಸೆಯ ಭಯಾನಕ ಚಿತ್ರಣ, ರಸ್ತೆಗಳಲ್ಲಿ ರಕ್ತದೋಕುಳಿ, ಜನರ ಕೂಗಾಟ ಮತ್ತು ಅಶ್ರುವಾಯುಗಳೊಂದಿಗೆ ಟ್ರಂಪ್ ಅವರನ್ನು ಸ್ವಾಗತಿಸುವುದು ಸರಿ ಕಾಣಿಸುವುದಿಲ್ಲ. ಟ್ರಂಪ್ ಅವರು ಪ್ರೀತಿಯ ಸಂದೇಶದೊಂದಿಗೆ ದೆಹಲಿಗೆ ಬಂದಿದ್ದಾರೆ ಎಂದಿದೆ.

ಸಿಎಎ ಮೇಲಿನ ಹಿಂಸಾಚಾರದ ಹಿಂದಿರುವ ಪಿತೂರಿಯನ್ನು ಕೇಂದ್ರ ಗೃಹ ಸಚಿವಾಲಯವು ತಿಳಿದಿಲ್ಲದಿರುವುದು ಕೂಡ ರಾಷ್ಟ್ರೀಯ ಭದ್ರತೆಗೆ ಮಾರಕವಾಗಿದೆ. ಆರ್ಟಿಕಲ್ 370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದಂತೆಯೇ ದೆಹಲಿ ಹಿಂಸಾಚಾರವನ್ನು ತಡೆಯಲು ಕೂಡ ಅದೇ ಧೈರ್ಯವನ್ನು ತೋರಿಸಬೇಕಾಗಿತ್ತು ಎಂದು ಶಿವಸೇನಾ ದೂರಿದೆ.

ಫೆಬ್ರುವರಿ 24ರಂದು ಗುಜರಾತಿನಅಹಮದಾಬಾದ್‌ಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದರು. ಈ ವೇಳೆಯೇ ದೆಹಲಿಯಲ್ಲಿ ಸಿಎಎ ಪರ ಮತ್ತು ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಎರಡು ಗುಂಪುಗಳ ಮಧ್ಯೆ ಸಂಭವಿಸಿದ ಹಿಂಸಾಚಾರದಿಂದಾಗಿ ಈಶಾನ್ಯ ದೆಹಲಿಯಲ್ಲಿ ಈವರೆಗೂ 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.