ನವದೆಹಲಿ: ಮೂರು ದಿನಗಳಿಂದ ಹಿಂಸಾಚಾರಕ್ಕೆ ತತ್ತರಿಸಿರುವ ರಾಷ್ಟ್ರ ರಾಜಧಾನಿಯಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದ್ದಾರೆ.
ಈಶಾನ್ಯ ದೆಹಲಿಯ ಡಿಸಿಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಗಲಭೆ ಪೀಡಿತ ಪ್ರದೇಶಗಳಿಗೂ ಭೇಟಿ ನೀಡಿದ ಅವರು ಪರಿಸ್ಥಿತಿ ಅವಲೋಕಿಸಿದ್ದಾರೆ. ಜತೆಗೆ, ಸ್ಥಳೀಯರ ಜತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹಿಳೆಯೊಬ್ಬರ ಬಳಿ ಮಾತನಾಡಿದ ಅವರು, ‘ಪ್ರೀತಿಯ ವಾತಾವರಣ ಕಾಪಾಡಿಕೊಳ್ಳಿ. ನಾವೆಲ್ಲ ಒಂದೇ ದೇಶದವರು, ಒಗ್ಗಟ್ಟಿನಿಂದ ಬಾಳಬೇಕಿದೆ. ನಾವು ಜತೆಯಾಗಿ ದೇಶ ಕಟ್ಟಬೇಕು’ ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಸುಮಾರು 200 ಮಂದಿ ಗಾಯಗೊಂಡಿದ್ದಾರೆ.
ರತನ್ ಲಾಲ್ ಕುಟುಂಬದವರಿಗೆ ₹ 1 ಕೋಟಿ: ದೆಹಲಿ ಗಲಭೆಯಲ್ಲಿ ಮೃತಪಟ್ಟ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಕುಟುಂಬದವರಿಗೆ ₹ 1 ಕೋಟಿ ನೆರವು ನೀಡುವುದಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ. ಕುಟುಂಬದ ಒಬ್ಬರು ಸದಸ್ಯರಿಗೆ ಉದ್ಯೋಗ ಕೊಡಿಸುವುದಾಗಿಯೂ ಹೇಳಿದ್ದಾರೆ.
‘ಶಾಂತಿ–ಸುವ್ಯವಸ್ಥೆ ಕಾಪಾಡುವ ಕರ್ತವ್ಯದಲ್ಲಿದ್ದ ವೇಳೆ ರತನ್ ಲಾಲ್ ಮೃತಪಟ್ಟಿರುವುದರಿಂದ ಬೇಸರವಾಗಿದೆ. ರತನ್ ಲಾಲ್ ಅವರಿಗೆಹುತಾತ್ಮರ ಗೌರವ ನೀಡಲಾಗಿದೆ. ಅವರಕುಟುಂಬದವರಿಗೆ ನೆರವು ನೀಡುತ್ತೇವೆ’ ಎಂದು ನಡ್ಡಾ ಹೇಳಿದ್ದಾರೆ.
ಸೋಮವಾರದ ಗಲಭೆ ವೇಳೆ ಕಲ್ಲೇಟು ತಲೆಗೆ ಬಲವಾಗಿ ತಾಗಿದ ಪರಿಣಾಮ ರತನ್ ಲಾಲ್ ಮೃತಪಟ್ಟಿದ್ದರು.
ಕಾಂಗ್ರೆಸ್ ಶಾಂತಿಯಾತ್ರೆ: ಶಾಂತಿ ಸಂದೇಶ ಸಾರುವ ಸಲುವಾಗಿ ಕಾಂಗ್ರೆಸ್ ಕಾರ್ಯಕರ್ತರು ‘ಶಾಂತಿ ಯಾತ್ರೆ‘ ಹಮ್ಮಿಕೊಂಡಿದ್ದಾರೆ. ಗಾಂಧಿ ಸ್ಮೃತಿ ವರೆಗೆ ಯಾತ್ರೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.