ನವದೆಹಲಿ: ಕೊರೊನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಮನೆಗಳಲ್ಲಿ ಬಂಧಿಯಾಗಿರುವ ಜನರನ್ನು ರಂಜಿಸಲು, ಅವರನ್ನು ಒತ್ತಡ, ಬೇಸರಗಳಿಂದ ಹೊರ ತರಲು ರಾಮಾಯಾಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವಂತೆ ಹಲವರು ಟ್ವಿಟರ್ ಮೂಲಕ ದೂರದರ್ಶನವನ್ನು ಆಗ್ರಹಿಸಿದ್ದಾರೆ. ಜನರ ಒತ್ತಡಗಳಿಗೆ ಮಣಿದಿರುವ ದೂರದರ್ಶನ ಮರು ಪ್ರಸಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶಶಿ ಶೇಖರ್, ‘ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಲಾಗಿದ್ದು, ಧಾರಾವಾಹಿಗಳ ಹಕ್ಕು ಸ್ವಾಮ್ಯ ಹೊಂದಿರುವವರೊಂದಿಗೆ ಚರ್ಚೆ ಆರಂಭಿಸಿದ್ದೇವೆ. ಮುಂದಿನ ಬೆಳವಣಿಗೆಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು,’ ಎಂದು ಎಂದಿದ್ದಾರೆ.
ಪ್ರಸಾರ ಭಾರತಿ ಅಧಿಕಾರಿಯೊಬ್ಬರು, 'ಎರಡೂ ಧಾರಾವಾಹಿಗಳ ಮರು ಪ್ರಸಾರಕ್ಕೆ ಇರುವ ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡ ಬಳಿಕವೇ ಸ್ಪಷ್ಟತೆ ಸಿಗಲಿದೆ,’ ಎಂದು ತಿಳಿಸಿದ್ದಾರೆ. ಈ ಕುರಿತು ದಿ ಪ್ರಿಂಟ್ ವರದಿ ಮಾಡಿದೆ.
ಭಾರತೀಯರನ್ನು ಕ್ವಾರಂಟೈನ್ ಮಾಡಿದ್ದ ಧಾರಾವಾಹಿಗಳು!
ರಾಮಾಯಣ ಮತ್ತು ಮಹಾಭಾರತ ಪೌರಾಣಿಕ ಧಾರಾವಾಹಿಗಳು ದೇಶದಲ್ಲಿ ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಭಾರಿ ಜನಪ್ರಿಯವಾಗಿದ್ದವು. ಈ ಎರಡೂ ಧಾರಾವಾಹಿಗಳು ದೇಶದ ಜನರನ್ನು ಮನೆಗಳಲ್ಲಿ ಬಂಧಿಗಳನ್ನಾಗಿ ಮಾಡಿದ್ದವು. ಸದ್ಯ ಜನರನ್ನು ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಬಲವಂತವಾಗಿ ಮನೆಗಳಲ್ಲಿ ಬಂಧಿಗಳನ್ನಾಗಿ ಮಾಡಲಾಗಿದೆ. ಇಂಥ ಹೊತ್ತಲ್ಲಿ ಜನರನ್ನು ಕ್ವಾರಂಟೈನ್ ಮಾಡಲು ಈ ಎರಡೂ ಧಾರಾವಾಹಿಗಳು ನೆರವಿಗೆ ಬರಬಲ್ಲವು ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.
ಈ ಧಾರಾವಾಹಿಗಳು ಜನರ ಒತ್ತಡವನ್ನು ನಿವಾರಿಸುವಲ್ಲಿಯೂ ಸಹಕಾರಿ ಎಂದು ಇನ್ನೂ ಕೆಲ ಮಂದಿ ಅಭಿಪ್ರಾಯಪಟ್ಟಿದ್ದಾರೆ.
1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ ರಮಾನಂದ ಸಾಗರ ಅವರ ರಾಮಾಯಣ ಧಾರಾವಾಹಿಯನ್ನೇ ಪ್ರಸಾರ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ. ಅಲ್ಲದೆ, 1988ರಲ್ಲಿ ದೂರದರ್ಶನ ಮೊದಲ ಬಾರಿಗೆ ಪ್ರಸಾರ ಮಾಡಿದ್ದ ಬಿ.ಆರ್ ಚೋಪ್ರಾ ಅವರ ಮಹಾಭಾರತವನ್ನೂ ಮರು ಪ್ರಸಾರ ಮಾಡುವಂತೆ ಜನ ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.