ಡೆಹ್ರಾಡೂನ್: ಕುಸಿತದ ಆತಂಕ ಆವರಿಸಿರುವ ಉತ್ತರಾಖಂಡ ರಾಜ್ಯದ ಜೋಶಿಮಠದ ಅಸುರಕ್ಷಿತ ಕಟ್ಟಡಗಳನ್ನು ಉರುಳಿಸುವ ಕಾರ್ಯ ಶನಿವಾರ ಪುನರಾರಂಭವಾಗಿದೆ. ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಉತ್ತರಾಖಂಡದ ಹಲವೆಡೆ ಶುಕ್ರವಾರ ಹಿಮಪಾತ ಮತ್ತು ಮಳೆ ಸುರಿದಿದ್ದರಿಂದ ತಾತ್ಕಾಲಿಕ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರ ಸಂಕಷ್ಟ ಮತ್ತಷ್ಟು ಹೆಚ್ಚಾಗಿತ್ತು.
‘ಕೆಟ್ಟ ಹವಾಮಾನದ ಹಿನ್ನೆಲೆಯಲ್ಲಿ ಜೋಶಿಮಠದ ಅಸುರಕ್ಷಿತ ಹೋಟೆಲ್ಗಳು ಮತ್ತು ಮನೆಗಳನ್ನು ಉರುಳಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು’ ಎಂದು ಚಮೊಲಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹಿಮಾಂಶು ಖುರಾನಾ ಹೇಳಿದ್ದಾರೆ.
ಭೂ ಕುಸಿತದಿಂದಾಗಿ ಜೋಶಿಮಠದ 849 ಮನೆಗಳಲ್ಲಿ ಬಿರುಕು ಮೂಡಿದ್ದು, 269 ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಶನಿವಾರ, ಡ್ರಿಲ್ಲಿಂಗ್ ಮೆಶಿನ್ಗಳು ಮತ್ತು ಬುಲ್ಡೋಜರ್ಗಳನ್ನು ಬಳಸಿ ಮಲಾರಿ ಇನ್ ಮತ್ತು ಮೌಂಟ್ ವೀವ್ ಹೋಟೆಲ್ಗಳನ್ನು ಉರುಳಿಸುವ ಕಾರ್ಯಾಚರಣೆ ಮತ್ತೆ ಶುರು ಮಾಡಲಾಗಿದೆ.
‘ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಜೋಶಿಮಠದ ಜನರಿಗೆ ಪರಿಹಾರ ಒದಗಿಸುವುದು ಮುಖ್ಯಮಂತ್ರಿ ಫುಷ್ಕರ್ ಸಿಂಗ್ ಧಾಮಿಯವರ ಆದ್ಯತೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.