ADVERTISEMENT

ನೋಟುಗಳ ಅಮಾನ್ಯೀಕರಣ ಉದ್ದೇಶ ಈಡೇರಿಲ್ಲ: ಅಧೀರ್‌ ರಂಜನ್‌ ಟೀಕೆ

ಪಿಟಿಐ
Published 9 ಡಿಸೆಂಬರ್ 2022, 11:14 IST
Last Updated 9 ಡಿಸೆಂಬರ್ 2022, 11:14 IST
ಅಧೀರ್‌ ರಂಜನ್‌ ಚೌಧರಿ
ಅಧೀರ್‌ ರಂಜನ್‌ ಚೌಧರಿ   

ನವದೆಹಲಿ: ₹1000 ಹಾಗೂ ₹ 500 ಮುಖಬೆಲೆಯ ನೋಟುಗಳ ಅಮಾನ್ಯೀಕರಣಗೊಳಿಸಿದ ಉದ್ದೇಶ ಈಡೇರಿಲ್ಲ. ಈಗಲೂ ನಗದು ಹರಿವಿನ ಪ್ರಮಾಣ ಹೆಚ್ಚಾಗಿಯೇ ಇದೆ. ಅಲ್ಲದೆ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಶುಕ್ರವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ‘2016ರಲ್ಲಿ ನಗದು ಹರಿವಿನ ಪ್ರಮಾಣ ₹18 ಲಕ್ಷ ಕೋಟಿಯಷ್ಟಿತ್ತು. ಆದರೆ, ಈಗ ₹31 ಲಕ್ಷ ಕೋಟಿಯಷ್ಟಿದೆ. ಅಲ್ಲದೇ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ಸ್ವಿಸ್‌ ಬ್ಯಾಂಕ್‌ಗಳಲ್ಲಿನ ಠೇವಣಿಗಳು ಸಹ ಅಧಿಕವಾಗಿವೆ’ ಎಂದರು.

‌‘ಕಪ್ಪುಹಣವನ್ನು ಮರಳಿ ದೇಶಕ್ಕೆ ತರಲು, ನಕಲಿ ನೋಟುಗಳ ಹಾವಳಿ ಹಾಗೂ ಭಯೋತ್ಪಾದನೆ ಕೊನೆಗೊಳಿಸುವ ಉದ್ದೇಶದಿಂದ ನೋಟುಗಳ ಅಮಾನ್ಯೀಕರಣ ಮಾಡಲಾಯಿತು. ಆದರೆ, ಈ ಯಾವ ಉದ್ದೇಶಗಳೂ ಈಡೇರಿಲ್ಲ. ನೋಟು ಅಮಾನ್ಯೀಕರಣದಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ’ ಅವರು ಟೀಕಿಸಿದರು.

ADVERTISEMENT

ಬಿಜೆಪಿ ನಾಯಕ ನಿಶಿಕಾಂತ್‌ ದುಬೆ ಅವರು, ‘ಕಾಂಗ್ರೆಸ್‌ ಆಡಳಿತದಲ್ಲಿ ಅಧಿಕವಾಗಿದ್ದ ಭ್ರಷ್ಟಾಚಾರ ಮತ್ತು ಭಯೋತ್ಪಾದಕರಿಗೆ ಸಂದಾಯವಾಗುತ್ತಿದ್ದ ಹಣದ ಹರಿವನ್ನುನಿರ್ಮೂಲನೆಗೊಳಿಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದೊಡ್ಡ ಹೆಜ್ಜೆಯನ್ನಿರಿಸಿದೆ’ ಎಂದು ನೀಡಿದ ಹೇಳಿಕೆಗೆ ಅಧೀರ್‌ ಅವರು ಪ್ರತ್ಯುತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.