ADVERTISEMENT

ಕೆಸಿಆರ್‌ಗೆ ಅವಹೇಳನ: ತೆಲಂಗಾಣ ಬಿಜೆಪಿ ಮುಖಂಡ ಜಿಟ್ಟಾ ಬಾಲಕೃಷ್ಣ ರೆಡ್ಡಿ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜೂನ್ 2022, 10:01 IST
Last Updated 10 ಜೂನ್ 2022, 10:01 IST
   

ಹೈದರಾಬಾದ್: ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಅವಹೇಳನ ಮಾಡಿದ ಆರೋಪದ ಮೇಲೆ ತೆಲಂಗಾಣ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಜಿಟ್ಟಾ ಬಾಲಕೃಷ್ಣ ರೆಡ್ಡಿ ಅವರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಬಂಡಿ ಸಂಜಯ್ ಕುಮಾರ್‌ ನೇತೃತ್ವದಲ್ಲಿ ಜೂನ್ 2 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಬಿಜೆಪಿ ರಾಜ್ಯ ಘಟಕವು ಕಿರುನಾಟಕ ಒಂದನ್ನು ಪ್ರದರ್ಶನ ಮಾಡಿತ್ತು. ಇದರಲ್ಲಿ ಸಿಎಂ ಕೆಸಿಆರ್‌ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ADVERTISEMENT

ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ಮತ್ತು ರಾಜ್ಯದ ಜನರಿಂದ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ವ್ಯಕ್ತಿಯನ್ನು ಕಿರುನಾಟಕದಲ್ಲಿ ಅವಮಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಿರುನಾಟಕದ ವಿಚಾರವಾಗಿ ಟಿಆರ್‌ಎಸ್ ಸಾಮಾಜಿಕ ಮಾಧ್ಯಮ ವಿಭಾಗದ ಸದಸ್ಯ ವೈ. ಸತೀಶ್ ರೆಡ್ಡಿ ಹಯತ್‌ನಗರದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಬಂಡಿ ಸಂಜಯ್‌, ಜಿಟ್ಟಾ ಬಾಲಕೃಷ್ಣ ರೆಡ್ಡಿ, ರಾಣಿ ರುದ್ರಮ್ಮ ಅವರನ್ನು ದೂರಿನಲ್ಲಿ ಹೆಸರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.