ಮುಂಬೈ: ‘ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಪತನಗೊಳಿಸುವ ಆಸಕ್ತಿ ಬಿಜೆಪಿಗಿಲ್ಲ. ಆದರೆ, ಅದಾಗಿಯೇ ಪತನಗೊಳ್ಳಲಿದೆ’ ಎಂದು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
‘ರಾಜ್ಯದ ಜನತೆಗೆ ಸರ್ಕಾರದ ವಿರುದ್ಧ ಅಸಮಾಧಾನವಿದೆ. ತಾನಾಗಿಯೇ ಸರ್ಕಾರ ಪತನಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.
ತಮ್ಮ ಪಕ್ಷವು ಸಮರ್ಥ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ಜನರ ಸಮಸ್ಯೆಗಳ ಬಗ್ಗೆ ದನಿಯೆತ್ತಲಿದೆ ಎಂದೂ ಅವರು ಹೇಳಿದ್ದಾರೆ.
ಆಡಳಿತಾರೂಢ ಶಿವಸೇನಾ ಮುಖ್ಯ ವಕ್ತಾರ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ಅವರು ಶನಿವಾರ ರಾತ್ರಿ ಫಡಣವೀಸ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಆದರೆ, ಈ ಭೇಟಿಯ ಹಿಂದೆ ರಾಜಕಾರಣವಿರಲಿಲ್ಲ ಎಂದು ಬಿಜೆಪಿ ಹೇಳಿಕೊಂಡಿದೆ. ಸಂಜಯ್ ರಾವುತ್ ಅವರು, ಪಕ್ಷದ ಮುಖವಾಣಿ ‘ಸಾಮ್ನ’ದ ಸಂಪಾದಕರೂ ಆಗಿದ್ದು, ದೇವೇಂದ್ರದ ಫಡಣವೀಸ್ ಅವರೊಂದಿಗೆ ನಿಗದಿಯಾಗಿರುವ ಸಂದರ್ಶನದ ಕುರಿತು ಚರ್ಚಿಸಲು ಭೇಟಿ ನಡೆದಿದೆ ಎಂದು ಸ್ಪಷ್ಟನೆ ನೀಡಲಾಗಿದೆ.
‘ರಾವುತ್ ಅವರು ನನ್ನ ಸಂದರ್ಶನ ಕೇಳಿದ್ದರು. ಆದರೆ, ಪೂರ್ಣ ಪ್ರಮಾಣದ ಸಂದರ್ಶನವನ್ನು ಪ್ರಕಟಿಸಬೇಕು. ನನ್ನದೇ ಕ್ಯಾಮರಾ ಬಳಸಲು ಅನುಮತಿ ಕೊಡಬೇಕು ಎಂಬುದೂ ಸೇರಿದಂತೆ ಸಂದರ್ಶನಕ್ಕೆ ಸೇರಿದ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಭೇಟಿಯಾಗಿದ್ದೆವು’ ಎಂದೂ ಫಡಣವೀಸ್ ಹೇಳಿದ್ದಾರೆ.
‘ಫಡಣವೀಸ್ ಅವರು ನಮ್ಮ ಶತ್ರುವಲ್ಲ. ನಾವು ಅವರ ಜತೆ ಕೆಲಸ ಮಾಡಿದ್ದೇವೆ. ರಾಜಕೀಯ ಪ್ರತಿಸ್ಪರ್ಧಿಗಳು ಎಂದ ಮಾತ್ರಕ್ಕೆ ಅವರು ಶತ್ರುಗಳಲ್ಲ. ಸಂದರ್ಶನದ ಬಗ್ಗೆ ಮಾತನಾಡುವುದಕ್ಕಾಗಿ ಅವರನ್ನು ಭೇಟಿಯಾಗಿದ್ದೇನೆ’ ಎಂದು ರಾವುತ್ ಸಹ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.