ಮುಂಬೈ: ಶಿವಸೇನೆ ನಾಯಕ ಮತ್ತು ನಿಯೋಜಿತ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್ ಅವರನ್ನು ಕೊಂಡಾಡಿದ್ದಾರೆ.
‘ಸಂಖ್ಯೆಗಳ ಪ್ರಕಾರ ಫಡಣವೀಸ್ ಮುಖ್ಯಮಂತ್ರಿಯಾಗಬಹುದಿತ್ತು. ಆದರೆ, ಬಾಳಾ ಠಾಕ್ರೆಯವರ ಶಿವಸೈನಿಕನೊಬ್ಬನನ್ನು ಸಿಎಂ ಮಾಡಿ ದೊಡ್ಡತನ ಮೆರೆದಿದ್ದಾರೆ’ ಎಂದು ಶಿಂಧೆ ಹೇಳಿದರು.
‘ಈ ಬಂಡಾಯ ಕ್ಯಾಬಿನೆಟ್ನಲ್ಲಿ ಸ್ಥಾನ ಪಡೆಯುವುದಕ್ಕಾಗಿ ಆಗಿರಲಿಲ್ಲ. ಬದಲಾಗಿ, ಸಿದ್ಧಾಂತ ಮತ್ತು ಬಾಳಾ ಠಾಕ್ರೆಯವರ ಹಿಂದುತ್ವಕ್ಕಾಗಿ ಆಗಿತ್ತು. ಅವು, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದಲ್ಲಿ ಕಣ್ಮರೆಯಾಗಿದ್ದವು’ ಎಂದು ಅವರು ಆರೋಪಿಸಿದರು.
‘ಬಾಳಾಠಾಕ್ರೆಯವರ ಶಿವಸೈನಿಕರನ್ನು ಬೆಂಬಲಿಸುವುದಾಗಿ ಫಡಣವೀಸ್ ನನಗೆ ಹೇಳಿದರು. ಅವರು ದೊಡ್ಡತನ ತೋರಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನ. ಪಂಚಾಯಿತಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಸ್ಥಾನವನ್ನೇ ಬಿಡದ ಕಾಲವಿದು. 120 ಶಾಸಕರ ಬಲ ಹೊಂದಿರುವವರು ಹೀಗೆ ಮಾಡಲು ಸಾಧ್ಯವೇ ಇಲ್ಲ’ ಎಂದು ಅವರು ಹೇಳಿದರು.
‘ಫಡಣವಿಸ್ ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ದ್ರೋಹ ಬಗೆಯುವುದಿಲ್ಲ. ಬಾಳಾ ಠಾಕ್ರೆಯವರ ಶಿವಸೈನಿಕರ ಮೇಲೆ ವಿಶ್ವಾಸವಿರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಅವರು ಇದೇ ವೇಳೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.