ADVERTISEMENT

₹5 ಲಕ್ಷ ಲಂಚ: ಸಿಬಿಐನಿಂದ ಬಂಧನದ ಬೆನ್ನಲ್ಲೇ ಅಧಿಕಾರಿ ಆತ್ಮಹತ್ಯೆ 

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 16:07 IST
Last Updated 25 ಮಾರ್ಚ್ 2023, 16:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಉದ್ಯಮಿಯೊಬ್ಬರಿಂದ ₹5 ಲಕ್ಷ ಲಂಚ ಪಡೆದ ವೇಳೆ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯದ (ಡಿಜಿಎಫ್‌ಟಿ) ಜಂಟಿ ನಿರ್ದೇಶಕ ಜಾವ್ರಿ ಮಾಲ್ ಬಿಷ್ಣೋಯಿ ಎಂಬುವರು ಅದಾಗಿ ಕೆಲ ಗಂಟೆಗಳಲ್ಲಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಹಾರದ ಡಬ್ಬಗಳನ್ನು ರಫ್ತು ಮಾಡಲು ಅಗತ್ಯವಿರುವ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಒದಗಿಸುವುದಕ್ಕಾಗಿ ಬಿಷ್ಣೋಯಿ ಅವರು ಉದ್ಯಮಿಯೊಬ್ಬರ ಬಳಿ ₹9 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

‘ಸಿಬಿಐ ಅಧಿಕಾರಿಗಳ ತಂಡವು ಪಂಚನಾಮೆ ನಡೆಸುತ್ತಿರುವಾಗ ಬಿಷ್ಣೋಯಿ ಅವರು ನಾಲ್ಕನೇ ಮಹಡಿಯಲ್ಲಿದ್ದ ತಮ್ಮ ಕಚೇರಿಯಿಂದ ಕೆಳಕ್ಕೆ ಜಿಗಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಪ್ರದ್ಯುಮನ್‌ ನಗರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ’ ಎಂದು ರಾಜ್‌ಕೋಟ್‌ ನಗರ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಬಿಷ್ಣೋಯಿ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿರುವ ಅವರ ಕುಟುಂಬದ ಸದಸ್ಯರು ಮೃತದೇಹವನ್ನು ತಮ್ಮ ಸುಪರ್ದಿಗೆ ಪಡೆಯಲು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.