ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್ಆರ್ಸಿ ವಿರುದ್ಧ ಶಾಹೀನ್ಬಾಗ್ನಲ್ಲಿ ಪ್ರತಿಭಟನೆ ನಡೆಸುತ್ತಿರುವವರಪೈಕಿಯಾರೂ ಯಾಕೆ ಅಸೌಖ್ಯಕ್ಕೀಡಾಗಿಲ್ಲ ಎಂದು ಬಿಜೆಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಪ್ರಶ್ನಿಸಿದ್ದಾರೆ.
ಸಿಎಎ ಮತ್ತು ಎನ್ಆರ್ಸಿ ಕುರಿತಾದ ಆತಂಕದಿಂದ ಪಶ್ಚಿಮ ಬಂಗಾಳದಲ್ಲಿ ಸುಮಾರು 30 ಜನ ಆತ್ಮಹತ್ಯೆ ಮಾಡಿದ್ದಾರೆ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಘೋಷ್, ‘ದೆಹಲಿಯ ಈ ತೀವ್ರ ಚಳಿಗಾಲದ ರಾತ್ರಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ತೆರೆದ ಮೈದಾನದಲ್ಲಿ ಕುಳಿತು ಸಿಎಎ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂಬುದು ನಮಗೆ ತಿಳಿದುಬಂದಿದೆ. ಅವರಲ್ಲಿ ಯಾರೊಬ್ಬರೂ ಅಸೌಖ್ಯಕ್ಕೀಡಾಗದಿರುವ ಬಗ್ಗೆ ನನಗೆ ಆಶ್ಚರ್ಯವಾಗುತ್ತಿದೆ. ಅವರಿಗೆ ಯಾಕೆ ಏನೂ ಆಗುತ್ತಿಲ್ಲ? ಒಬ್ಬನೇ ಒಬ್ಬ ಪ್ರತಿಭಟನಾಕಾರನೂ ಯಾಕೆ ಸಾವಿಗೀಡಾಗಿಲ್ಲ’ ಎಂದು ಪ್ರಶ್ನಿಸಿದ್ದಾರೆ.
‘ಇದು ಅಸಂಬದ್ಧವಾಗಿದೆ. ಏನೂ ಆಗದಿರಲು ಅವರೇನಾದರೂ ಮಕರಂದ ಸೇವಿಸಿದ್ದಾರೆಯೇ? ಆದರೆ, ಬಂಗಾಳದಲ್ಲಿ ಮಾತ್ರ ಕೆಲವರು ಆತಂಕದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
ಜತೆಗೆ,ಶಾಹೀನ್ಬಾಗ್ ಮತ್ತು ಪಾರ್ಕ್ ಸರ್ಕಸ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವವರಿಗೆ ಹಣಕಾಸು ಸಹಾಯ ಒದಗಿಸುತ್ತಿರುವವರು ಯಾರು ಎಂದೂ ಪ್ರಶ್ನಿಸಿದ್ದಾರೆ. ‘ಅವರಿಗೆ (ಪ್ರತಿಭಟನಾಕಾರರಿಗೆ) ಹಣ ಎಲ್ಲಿಂದ ಬರುತ್ತಿದೆ ಎಂಬ ಬಗ್ಗೆ ಆಶ್ಚರ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಸತ್ಯ ಹೊರಬರಲಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.