ಪಣಜಿ: ‘ಬಿಜೆಪಿ ಸೇರಲು ಗೋವಾ ಕಾಂಗ್ರೆಸ್ನ ಶಾಸಕರಿಗೆ ತಲಾ ₹30 ರಿಂದ ₹40 ಕೋಟಿ ನೀಡಲಾಗಿದೆ’ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಗೋವಾ ಕಾಂಗ್ರೆಸ್ನ 11 ಶಾಸಕರಲ್ಲಿ ಎಂಟು ಶಾಸಕರು ಬುಧವಾರ ಬಿಜೆಪಿ ಸೇರಿದ್ದರು. ಕಾಂಗ್ರೆಸ್ ಅನ್ನು ಬಿಜೆಪಿ ಜತೆ ವಿಲೀನ ಮಾಡುವ ಸಂಬಂಧ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ನಿರ್ಣಯ ಅಂಗೀಕರಿ
ಸಲಾಗಿತ್ತು. ಕಾಂಗ್ರೆಸ್ ಶಾಸಕಾಂಗ ಪಕ್ಷವನ್ನು ಬಿಜೆಪಿ ಜತೆ ವಿಲೀನ ಮಾಡುವ ಸಂಬಂಧ ನೀಡಲಾಗಿದ್ದ ಮನವಿ ಪತ್ರವನ್ನುಗೋವಾ ವಿಧಾನಸಭಾ ಸ್ಪೀಕರ್ ಗುರುವಾರ ಮಾನ್ಯ ಮಾಡಿದ್ದಾರೆ. ಇದೇ ವೇಳೆ ರಾಜ್ಯ ಕಾಂಗ್ರೆಸ್ನಲ್ಲಿನ ಬೆಳವಣಿಗೆ ಮತ್ತು ಸ್ಥಿತಿಯನ್ನು ಪರಿಶೀಲಿಸಲು ದಿನೇಶ್ ಗುಂಡೂರಾವ್ ಅವರು ಇಲ್ಲಿಗೆ ಬಂದಿದ್ದಾರೆ.
‘ಆ ಎಂಟು ಶಾಸಕರು ಗೋವಾದ ಅಭಿವೃದ್ಧಿಗಾಗಿ ಬಿಜೆಪಿಗೆ ಹೋಗಿಲ್ಲ. ಅವರು ಅಧಿಕಾರ ಮತ್ತು ಹಣಕ್ಕಾಗಿ ಈ ಕೆಲಸ ಮಾಡಿದ್ದಾರೆ. ಅವರು ಮಾಡಿರಬಹುದಾದ ತಪ್ಪಿಗಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಿಟ್ಟು ಬೆದರಿಸಲಾಗಿದೆ ಮತ್ತು ಎಲ್ಲರಿಗೂ ₹30 ಕೋಟಿಯಿಂದ ₹40 ಕೋಟಿ ನೀಡಲಾಗಿದೆ. ಕೆಲವರಿಗೆ ಸಚಿವ ಸ್ಥಾನವನ್ನೂ ನೀಡಲಾಗುತ್ತದೆ’ ಎಂದು ಅವರು ಆರೋಪಿಸಿದ್ದಾರೆ.
‘ಹೈಕಮಾಂಡ್ ನಿರ್ಧಾರ’: ಬಿಜೆಪಿ ಹೈಕಮಾಂಡ್ ಸಮ್ಮತಿಯ ಮೂಲಕವೇ ಕಾಂಗ್ರೆಸ್ನ ಎಂಟು ಶಾಸಕರು ಬಿಜೆಪಿ ಸೇರಿದ್ದಾರೆ ಎಂದು ಗೋವಾ ಬಿಜೆಪಿ ಘಟಕದ ಅಧ್ಯಕ್ಷ ಸದಾನಂದ ಶೇಠ್ ತಾನಾವಡೆ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.