ADVERTISEMENT

ಚುನಾವಣಾ ಆಯೋಗ ವಿಸರ್ಜಿಸಿ: ಕಾಂಗ್ರೆಸ್ ಒತ್ತಾಯ

ಪಿಟಿಐ
Published 3 ಮೇ 2021, 10:58 IST
Last Updated 3 ಮೇ 2021, 10:58 IST
ಆನಂದ ಶರ್ಮಾ ಮತ್ತು ರಾಹುಲ್‌ ಗಾಂಧಿ
ಆನಂದ ಶರ್ಮಾ ಮತ್ತು ರಾಹುಲ್‌ ಗಾಂಧಿ   

ನವದೆಹಲಿ: ಚುನಾವಣಾ ಆಯೋಗವನ್ನು ವಿಸರ್ಜಿಸಿ, ಈ ಆಯೋಗದ ಸದಸ್ಯರು ಕೈಗೊಂಡಿರುವ ಕ್ರಮಗಳನ್ನು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಆನಂದ ಶರ್ಮಾ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಸಂಬಂಧ ರೂಪಿಸಿರುವ ಅರ್ಹತಾ ಮಾನದಂಡಗಳ ಬಗ್ಗೆ ಸಾಂವಿಧಾನಿಕ ಪೀಠವಾಗಿರುವ ಸುಪ್ರೀಂ ಕೋರ್ಟ್‌ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡ ಒಂದು ದಿನದ ನಂತರ ಆನಂದ ಶರ್ಮಾ ಈ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ADVERTISEMENT

ಇತ್ತೀಚಿನ ಚುನಾವಣೆಗಳು, ಚುನಾವಣಾ ಆಯೋಗದ ನಡವಳಿಕೆ ಕುರಿತು ಗಂಭೀರವಾಗಿ ಚಿಂತಿಸುವಂತೆ ಮಾಡಿವೆ. ಇಂಥ ಚುನಾವಣಾ ಆಯೋಗವನ್ನು ವಿಸರ್ಜಿಸಬೇಕು. ಚುನಾವಣೆ ನಡೆದಿರುವ ರಾಜ್ಯಗಳಲ್ಲಿ ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆಯುವಂತಹ ಉದಾಹರಣೆಗಳಿದ್ದು, ಈ ಸಂಬಂಧ ಆಯೋಗದ ಸದಸ್ಯರು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಶರ್ಮಾ ಒತ್ತಾಯಿಸಿದ್ದಾರೆ.

‘ಕೇಂದ್ರ ಚುನಾವಣಾ ಆಯೋಗದ ರಚನೆ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗಾಗಿ ಇರುವ ಅರ್ಹತಾ ಮಾನದಂಡ ಗಳ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ಧಾರ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿರುವ ಶರ್ಮಾ, ‘ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವುದಕ್ಕಾಗಿ ಸಂವಿಧಾನದ ಆರ್ಟಿಕಲ್‌ 324ರ ನಿಯಮವನ್ನು ಚುನಾವಣಾ ಆಯೋಗ ಉಲ್ಲಂಘಿಸಿದೆ ಎಂದು ಶರ್ಮಾ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಕ್ರಮಗಳು ನಿಸ್ಸಂಶಯವಾಗಿ ಪಕ್ಷಪಾತದಿಂದ ಕೂಡಿವೆ. ಅಲ್ಲಿ ಬಿಜೆಪಿಯ ಪರವಾಗಿ ಆಯೋಗ ಕೆಲಸ ಮಾಡಿರುವ ಸಾಕಷ್ಟು ಉದಾಹರಣೆಗಳಿವೆ‘ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.