
ದೆಹಲಿ: ಕೋಲಿ ಗಂಗಾಮತ ಸಮಾಜದ ಅಭಿವೃದ್ಧಿ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.
ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರ ಸಮ್ಮುಖದಲ್ಲಿ ಕೇಂದ್ರದ ಹಿರಿಯ ಅಧಿಕಾರಿಗಳು ಮತ್ತು ಸಮುದಾಯದ ನಾಯಕರೊಂದಿಗೆ ಸಭೆ ನಡೆಸಿ ಸಮುದಾಯದ ಅಭಿವೃದ್ಧಿ ಕುರಿತಂತೆ ಚರ್ಚಿಸಲಾಗಿದೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ದೆಹಲಿಗೆ ನಿಯೋಗ ಬಂದಿದ್ದ ಕೋಲಿ ಗಂಗಾಮತ ಸಮಾಜದ ನಾಯಕರು ತಮ್ಮನ್ನು ಭೇಟಿಯಾಗಿದ್ದು, ಕೇಂದ್ರ ಕೃಷಿ ಭವನದಲ್ಲಿ ಸಭೆ ನಡೆಸಿ, ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಸಚಿವ ಪ್ರಹ್ಲಾದ ಜೋಶಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕೋಲಿ ಗಂಗಾಮತ ಸಮಾಜದ ನಾಯಕರು ತಮ್ಮ ಸಮುದಾಯದ ಅಭಿವೃದ್ಧಿ ಮತ್ತು ಸಮಾಜಕ್ಕೆ ಸಿಗಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸುವಂತೆ ಗಮನ ಸೆಳೆದಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.
ದೆಹಲಿಯ ಕೃಷಿ ಭವನದಲ್ಲಿ ಸಚಿವದ್ವಯರನ್ನು ಭೇಟಿ ಮಾಡಿದ ಕೋಲಿ ಗಂಗಾಮತ ಸಮಾಜದ ನಿಯೋಗ ಈ ಮತದ ಅಭಿವೃದ್ಧಿ ಸೇರಿದಂತೆ ಕುಂದು-ಕೊರತೆಗಳ ಬಗ್ಗೆ ಚರ್ಚೆ ನಡೆಸಿ, ತಮ್ಮ ಸಮುದಾಯದ ಅಭಿವೃದ್ಧಿಗೆ ಸ್ಪಂದಿಸುವಂತೆ ಮನವಿ ಮಾಡಿತು.
ನಿಯೋಗದಲ್ಲಿ ಎನ್. ರವಿಕುಮಾರ್, ಆರ್. ಧರ್ಮಪ್ಪ, ಕೆ. ಶಿವಲಿಂಗಪ್ಪ, ಮಹಾದೇವಪ್ಪ ಕರ್ಜಗಿ, ಅವ್ವಣ್ಣ ಮಾಯಕೇರಿ, ವಿಜಯ್ ಕುಮಾರ್ ಇದ್ದರು.
ಸಭೆಯಲ್ಲಿ ಸಚಿವರೊಟ್ಟಿಗೆ ಬುಡಕಟ್ಟು ವ್ಯವಹಾರಗಳ ಕಾರ್ಯದರ್ಶಿ ವಿಭು ನಾಯರ್, ಬುಡಕಟ್ಟು ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಆರ್. ಜಯ, ಹೆಚ್ಚುವರಿ ರಿಜಿಸ್ಟ್ರಾರ್ ಜನರಲ್ ಡಾ. ಬಾಬುಲ್ ರಾಯ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.