ಚೆನ್ನೈ: ಡಿಎಂಕೆ ಪಕ್ಷದ ಹಿರಿಯ ನಾಯಕ ದಿ. ಕರುಣಾನಿಧಿ ಅವರ ಹಿಂದಿ ವಿರೋಧಿ ಆಂದೋಲನವನ್ನು ತಮಿಳನಾಡಿನ ಜನತೆ ಇನ್ನೂ ನೆನಪಿಟ್ಟುಕೊಂಡಿದ್ದಾರೆ ಎಂದು ಹೇಳುವ ಮೂಲಕ ರಾಜ್ಯದಲ್ಲಿ ಹೇರಿಕೆಗೆ ಅವಕಾಶ ನೀಡಲ್ಲ ಎಂಬ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ಡಿಎಂಕೆ ನೀಡಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಮುಖವಾಣಿ 'ಮುರಸೋಲಿ'ಯಲ್ಲಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಎಂಬ ಶೀರ್ಷಿಕೆಯಡಿ ಕರುಣಾನಿಧಿ ಅವರ ಹಿಂದಿ ಹೇರಿಕೆ ವಿರುದ್ಧದ ಘೋಷಣೆಯನ್ನು ಪ್ರಕಟಿಸಲಾಗಿದೆ.
1938ರಲ್ಲಿ 14 ವರ್ಷದ ವಿದ್ಯಾರ್ಥಿಯಾಗಿದ್ದ ಕರುಣಾನಿಧಿ ಅವರು ವಿದ್ಯಾರ್ಥಿಗಳನ್ನು ಜೊತೆಗೂಡಿಸಿಕೊಂಡು ತಮ್ಮ ಹುಟ್ಟೂರು ತಿರುವಾರೂರು ಬೀದಿಗಳಲ್ಲಿ ಹಿಂದಿ ಹೇರಿಕೆಯ ವಿರುದ್ಧದ ಘೋಷಣೆಗಳನ್ನು ಮೊಳಗಿಸಿದ್ದರು. ಇದೇ ವಿಚಾರವನ್ನು ಇದೀಗ ಪ್ರಸ್ತಾಪಿಸಿರುವ ಡಿಎಂಕೆ,ತಮಿಳುನಾಡಿನ ಜನತೆ ಈ ಘಟನೆಯನ್ನು ಇನ್ನೂ ನೆನಪಿನಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ಮರೆಯಬೇಡಿ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ ಎಂದು ಮುಖವಾಣಿಯಲ್ಲಿ ಉಲ್ಲೇಖಿಸಿದೆ.
ರಾಜ್ಯಗಳು ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿಯನ್ನು ಬಳಸಬೇಕು ಎಂಬ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು, ಇದರಿಂದ ಭಾರತದಸಮಗ್ರತೆಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.