ಚೆನ್ನೈ: 18 ವರ್ಷದ ದಲಿತ ಯುವತಿಗೆ ಕಿರುಕುಳ ನೀಡಿದ ಆರೋಪದ ಅಡಿ, ಪಲ್ಲವರಂನ ಡಿಎಂಕೆ ಶಾಸಕ ಇ. ಕರುಣಾನಿಧಿ ಅವರ ಮಗ ಮತ್ತು ಸೊಸೆಯನ್ನು ತಮಿಳುನಾಡು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಶಾಸಕರ ಮಗ ಆ್ಯಂಟೋ ಮಧಿವನನ್ ಹಾಗೂ ಸೊಸೆ ಮೆರ್ಲಿನ್ ಬಂಧಿತರು. ಸಂತ್ರಸ್ತ ಯುವತಿಯು ಇವರ ಮನೆಯಲ್ಲಿ ಸುಮಾರು ಆರು ತಿಂಗಳಿನಿಂದ ಕೆಲಸ ಮಾಡುತ್ತಿದ್ದಳು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಸ್ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಆರೋಪಿಗಳು ಕಳೆದ ಕೆಲವು ದಿನಗಳಿಂದ ಆಂಧ್ರಪ್ರದೇಶದಲ್ಲಿ ಅಡಗಿಕೊಂಡಿದ್ದರು. ಅಲ್ಲಿಂದಲೇ ಅವರನ್ನು ಬಂಧಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪೊಂಗಲ್ ಹಬ್ಬದ ನಿಮಿತ್ತ ಸಂತ್ರೆಸ್ತೆಯು ಕಲ್ಲಕುರುಚಿ ಜಿಲ್ಲೆಯಲ್ಲಿರುವ ತಮ್ಮ ಊರಿಗೆ ತೆರಳಿದ್ದರು. ಆ್ಯಂಟೋ ಮಧಿವನನ್ ಹಾಗೂ ಮೆರ್ಲಿನ್ ಅವರು ದೌರ್ಜನ್ಯ ಎಸಗಿರುವುದು ಸಂತ್ರಸ್ತೆ ಊರಿಗೆ ಮರಳಿದ್ದಾಗ ಬಹಿರಂಗವಾಗಿದೆ. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ಆಕೆಯ ದೇಹದ ಮೇಲೆ ಗಾಯಗಳಾಗಿರುವುದನ್ನು ವೈದ್ಯರು ಗುರುತಿಸಿದ್ದರು.
ಮಾನಸಿಕ ಹಿಂಸೆ ನೀಡುತ್ತಿದ್ದ ಆರೋಪಿಗಳು: ‘ಆರೋಪಿಗಳು ಅನೇಕ ಬಾರಿ ರಾತ್ರಿ 2 ಗಂಟೆವರೆಗೆ ನನ್ನಿಂದ ಕೆಲಸ ಮಾಡಿಸಿಕೊಂಡು ಮತ್ತೆ ಬೆಳಿಗ್ಗೆ 6 ಗಂಟೆಗೆ ಎಬ್ಬಿಸುವ ಮೂಲಕ ಮಾನಸಿಕ ಚಿತ್ರಹಿಂಸೆ ನೀಡುತ್ತಿದ್ದರು. ನನ್ನ ವಿದ್ಯಾಭ್ಯಾಸದ ಉದ್ದೇಶಕ್ಕಾಗಿ ಕೆಲಸ ಮಾಡಬೇಕಾದ ಸ್ಥಿತಿ ಬಂತು. ಅವರಿಬ್ಬರೂ ಇಲ್ಲಿಯವರೆಗೆ ನನಗೆ ಸಂಬಳವನ್ನೇ ನೀಡಿಲ್ಲ’ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಘಟನೆ ಕುರಿತು ಹಲವೆಡೆ ಆಕ್ರೋಶ ವ್ಯಕ್ತವಾದ ಬಳಿಕ ನೀಲಾಂಕರೈ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.