ADVERTISEMENT

ಎಐಆರ್‌ ಬದಲು ‘ಆಕಾಶವಾಣಿ’ ಪದ ಬಳಕೆ; ಡಿಎಂಕೆ ಖಂಡನೆ

ಪಿಟಿಐ
Published 7 ಮೇ 2023, 12:56 IST
Last Updated 7 ಮೇ 2023, 12:56 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಚೆನ್ನೈ (ಪಿಟಿಐ): ರಾಷ್ಟ್ರೀಯ ಬಾನುಲಿ ಸೇವೆಯನ್ನು ‘ಆಲ್‌ ಇಂಡಿಯ ರೇಡಿಯೊ (ಎಐಆರ್‌)’ ಬದಲಾಗಿ ‘ಆಕಾಶವಾಣಿ’ ಎಂದೇ ಕರೆಯುವಂತೆ ಪ್ರಸಾರ ಭಾರತಿ ನೀಡಿರುವ ನಿರ್ದೇಶನವನ್ನು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಭಾನುವಾರ ವಿರೋಧಿಸಿದೆ.

ಈ ಕುರಿತು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಸಿಂಗ್‌ ಠಾಕೂರ್ ಅವರಿಗೆ ಪತ್ರ ಬರೆದಿರುವ ಡಿಎಂಕೆ ಸಂಸದ ಟಿ.ಆರ್‌. ಬಾಲು ಅವರು, ಎಐಆರ್‌ ಎಂಬ ಹೆಸರನ್ನೇ ಮುಂದುವರೆಸುವಂತೆ ಆಗ್ರಹಿಸಿದ್ದಾರೆ. ಈ ಹಠಾತ್‌ ನಿರ್ಧಾರ ಸ್ವೀಕಾರ್ಹವಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ. 

‘ಅನುರಾಗ್ ಠಾಕೂರ್‌ ಅವರು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಆಲ್‌ ಇಂಡಿಯ ರೇಡಿಯೊ ಎಂಬ ಹೆಸರೇ ಇನ್ನು ಮುಂದೆಯೂ ಇರುವಂತೆ ನೋಡಿಕೊಳ್ಳಬೇಕು. ಪ್ರಸಾರ ಭಾರತಿಯ ಈ ನಿರ್ಧಾರದ ಕುರಿತು ತಮಿಳುನಾಡು ಸೇರಿ ಹಲವೆಡೆ ಈಗಾಗಲೇ ಪ್ರತಿಭಟನೆಗಳು ನಡೆಯುತ್ತಿವೆ’ ಎಂದು ಬಾಲು ಅವರು ಹೇಳಿದ್ದಾರೆ. 

ADVERTISEMENT

ಎಐಆರ್‌ನಲ್ಲಿ ತಮಿಳು ಭಾಷೆಗೆ ನ್ಯಾಯಬದ್ಧವಾಗಿ ಸಿಗಬೇಕಾದ ಸ್ಥಾನವನ್ನು ನಿರಾಕರಿಸಿರುವುದಾಗಿ ಮತ್ತು ಹಿಂದಿ ಹೇರಿಕೆ ಮಾಡಿರುವುದಾಗಿ ಆರೋಪಿಸಿ ತಮಿಳುನಾಡಿನ ಹಲವು ರಾಜಕೀಯ ಪಕ್ಷಗಳು ಪ್ರಸಾರ ಭಾರತಿಯ ನಿರ್ಧಾರವನ್ನು ಖಂಡಿಸಿವೆ.

ತಮಿಳುನಾಡಿನಲ್ಲಿ ಆಕಾಶವಾಣಿಗೆ ಪರ್ಯಾಯವಾಗಿ ತಮಿಳಿನ ‘ವಾನೋಲಿ’ ಪದವನ್ನು ಬಳಸಲಾಗುತ್ತದೆ. 

ಎಐಆರ್‌ಗೆ ಆಕಾಶವಾಣಿ ಎಂದು ನಾಮಕರಣ ಮಾಡುವುದು ಹಳೆಯ ನಿರ್ಧಾರವಾಗಿದ್ದು, ಇದನ್ನು ಜಾರಿಗೊಳಿಸುವಂತೆ ಎಐಆರ್‌ ಕೇಂದ್ರಗಳಿಗೆ ಈಗ ನಿರ್ದೇಶನ ಮಾಡಲಾಗಿದೆ ಎಂದು ಪ್ರಸಾರ ಭಾರತಿ ಈ ಹಿಂದೆಯೇ ಹೇಳಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.